ಗ್ಯಾರಂಟಿ ಯೋಜನೆಯ ಮೂಲಕ ಕ್ಷೇತ್ರಕ್ಕೆ 250 ಕೋಟಿ ರೂ. ಬಿಡುಗಡೆ ಅಭಿವೃದ್ಧಿಯಲ್ಲವೇ..?
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಶ್ನೆ…

ಅಭಿವೃದ್ಧಿಯೆಂದರೆ ರಸ್ತೆ ಸೇತುವೆ ಕಟ್ಟಡ ಭೌಗೋಳಿಕ ಅಭಿವೃದ್ಧಿ ಮಾತ್ರವಲ್ಲ ಅಭಿವೃದ್ಧಿ ಎಂದರೆ ರಾಜ್ಯದ ಜನರ ಜೀವನ ಮಟ್ಟ ಸುಧಾರಣೆಯ ಮೂಲಕ ನಾಡಿನ ಜನರ ಸರ್ವತೋಮುಖ ಏಳಿಗೆಯೂ ಅಭಿವೃದ್ಧಿಯಾಗಿದೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅಭಿವೃದ್ಧಿ ಹೆಸರಲ್ಲಿ ಕಮಿಷನ್ ಪಡೆದವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಶೂನ್ಯವಾಗಿದ್ದೇ ಬಿಜೆಪಿ ಶಾಸಕರ ಚಿಂತೆಗೆ ಕಾರಣವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ 56,೦೦೦ ಕೋಟಿ ರೂಪಾಯಿಯನ್ನು ಮೀಸಲಿಟ್ಟಿದ್ದರಿಂದಾಗಿ ಸರಾಸರಿ 250 ಕೋಟಿ ರೂಪಾಯಿಯಷ್ಟು ಹಣವು ಪ್ರತೀ ವರ್ಷವೂ ರಾಜ್ಯದ 224 ಕ್ಷೇತ್ರಕ್ಕೂ ಹರಿದು ಬರುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಪ್ರತೀ ಕ್ಷೇತ್ರಕ್ಕೂ ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ರಾಜ್ಯ ಸರ್ಕಾರವು ನೇರವಾಗಿ ಜನರಿಗೆ ತಲುಪಿಸುತ್ತಿದೆ, ಪಂಚ ಗ್ಯಾರಂಟಿಗಳ ಮೂಲಕ ಜನರ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ವಿದ್ಯುತ್, ಸಾರಿಗೆ ವ್ಯವಸ್ಥೆಯನ್ನು ಪೂರೈಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಯಶಸ್ವಿಯಾಗಿದೆ.
ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದಾಗಿ ಜನರ ಮುಖದಲ್ಲಿ ಸಂತಸದ ನಗು ಕಾಣಿಸುತ್ತಿದ್ದು ಸ್ವಂತ ಅಭಿವೃದ್ಧಿಯ ಕನಸಿನಲ್ಲಿದ್ದ ವಿರೋಧ ಪಕ್ಷದವರಿಗೆ ಕಮಿಷನ್ ಶೂನ್ಯದಿಂದಾಗಿ ಮುಖದಲ್ಲಿ ಚಿಂತೆ ಎದ್ದು ಕಾಣುತ್ತಿದೆ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








































