
ಹುಬ್ಬಳ್ಳಿ: ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಸುದ್ದಿಗಾರರೊಂದಿಗೆ ಮಾತನಾಡಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಸಚಿವ ಜಮೀರ್ ಅಹಮದ್ ಖಾನ್ ರೈತರು ಮತ್ತು ಜನಸಾಮಾನ್ಯರ ಆಸ್ತಿ ಕಬಳಿಸುವ ಮೂಲಕ ದೇಶದ್ರೋಹಿ ಕೆಲಸ ಮಾಡುತ್ತಿದ್ದು, ಅವರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಮೀರ್ ಅಹಮದ್ ಖಾನ್ ರಾಜ್ಯಾದ್ಯಂತ ವಕ್ಫ್ ಅದಾಲತ್ ನಡೆಸುತ್ತಿದ್ದು, ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಇವರಿಗೆ ಅಧಿಕಾರದಮದ ಏರಿದೆ. ತನ್ನ ಚಾಮರಾಜಪೇಟೆ ಕ್ಷೇತ್ರದಲ್ಲಿ 25 ಸಾವಿರಕ್ಕೂ ಅಧಿಕ ದೇಶದ್ರೋಹಿ ಬಾಂಗ್ಲಾ ಮುಸ್ಲಿಮರನ್ನು ಸಲಹುತ್ತಿದ್ದಾರೆ. ಈತನಿಂದಲೇ ರಾಜ್ಯದಲ್ಲಿ ಧಂಗೆ, ಗಲಭೆ ನಡೆಯುತ್ತಿವೆ. ಬಿಜೆಪಿ ಸೇರಿದಂತೆ ಹಲವರು ಜಮೀರ್ ಅವರಿಗೆ ಸಚಿವ ಸಂಪುಟದಿಂದ ಕೈಬಿಡಬೇಕು, ದೇಶದಿಂದ ಗಡೀಪಾರು ಎಂಬಿತ್ಯಾದಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ನಾನು ಹೇಳುವೆ ಈ ಕೂಡಲೇ ಅವನನ್ನು ಬಂಧಿಸಿ, ಗಲ್ಲಿಗೇರಿಸಬೇಕು ಎಂದು ಕಿಡಿ ಕಾರಿದರು.
ರಾಜ್ಯದಲ್ಲಿನ ಕೆಲವು ಮುಸ್ಲಿಂ ಜಿಲ್ಲಾಧಿಕಾರಿ, ತಹಸೀಲ್ದಾರ್, ನೋಂದಣಾಧಿಕಾರಿ, ಪಿಡಿಒಗಳು ತಾವು ಸಲ್ಲಿಸುತ್ತಿರುವ ಪ್ರದೇಶಗಳಲ್ಲಿ ವಕ್ಫ್ ಬೋರ್ಡ್ ಹೆಸರಲ್ಲಿ ಅಮಾಯಕರ ಆಸ್ತಿ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ನಿರ್ಧಾರಕ್ಕೆ ಶ್ರೀರಾಮಸೇನೆ ಸ್ವಾಗತಿಸುತ್ತದೆ. ದೇಶದ ಎಲ್ಲ ಹಿಂದೂಗಳು ಒಂದಾಗಿ ಈ ವಕ್ಫ್ ವಿರುದ್ಧ ಹೋರಾಡಿದರೆ ಮಾತ್ರ ನಮ್ಮ ಉಳಿವು ಸಾಧ್ಯವಿದೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಎಲ್ಲ ಹಿಂದೂ ಬಾಂಧವರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.






















































