
ಬೆಂಗಳೂರು: ಬೆಂಗಳೂರಿನ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತದಲ್ಲಿ ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರವು 2 ಲಕ್ಷ ರೂಪಾಯಿ ಘೋಷಿಸಿದ ಬೆನ್ನೆಲ್ಲೆ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ತರ ಅಕ್ರಮ ಕಟ್ಟಡಗಳನ್ನು ಕಟ್ಟಿ ಅನಾಹುತ ಸಂಭವಿಸಿದರೆ ಸತ್ತವರಿಗೆ ಹೊಣೆ ಯಾರು? ಎಂದು ಖಾರವಾಗಿ ಪ್ರಶ್ನಿಸಿದರು.
ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು 6 ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬದವರಿಗೆ ಕಾರ್ಮಿಕ ಇಲಾಖೆಯಿಂದ 2 ಲಕ್ಷ ರೂಪಾಯಿ, ಬಿಬಿಎಂಪಿಯಿಂದ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. 6 ಮಂದಿ ಗಾಯಗೊಂಡಿದ್ದು, ಅವರ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಪರಿಹಾರ ನೀಡಿರುವುದು ಅವರ ಜೀವಕ್ಕೆ ಸಮವಲ್ಲ. ಜೀವಕ್ಕೆ ಬೆಲೆ ಕಟ್ಟಲಾಗದು. ಆದರೂ ಮೃತರೆಲ್ಲ ಕೂಲಿ ಕಾರ್ಮಿಕರು. ಅವರನ್ನು ನಂಬಿಕೊಂಡವರಿಗೆ ನೆರವು ನೀಡಬೇಕಿದೆ. ಮೃತದೇಹವನ್ನು ಅವರ ಊರಿಗೆ ಕೊಂಡೊಯ್ಯಲೂ ವ್ಯವಸ್ಥೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
















































