ಘಟನೆ ಆಕಸ್ಮಿಕ ಎಂದ ಗೃಹ ಸಚಿವ ಪರಮೇಶ್ವರ್

ನಾಗಮಂಗಲ: ಪಟ್ಟಣದ ಬದರಿಕೊಪ್ಪಲು ಮತ್ತು ನಾಗಮಂಗಲ ಪಟ್ಟಣದ ವಿನಾಯಕ ಬಳಗ ಯುವಕರ ಸಂಘದ ವತಿಯಿಂದ ಬುಧವಾರ ಗಣಪತಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ವೇಳೆ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಇದರ ಪರಿಣಾಮ ಪೊಲೀಸರು ಸೇರಿ ಹಲವು ಯುವಕರು ಗಾಯಗೊಂಡಿರುವ ಘಟನೆ ನಡೆದಿದೆ.
ಪಟ್ಟಣದ ಮುಖ್ಯರಸ್ತೆಯಲ್ಲಿ ಶಾಂತಿಯುತವಾಗಿ ಮೆರವಣಿಗೆ ನಡೆಯುತ್ತಿದ್ದಾಗ ಪಟ್ಟಣದ ಮಂಡ್ಯ ವೃತ್ತ, ಮೈಸೂರು ರಸ್ತೆಯ ಬಳಿ ಮೆರವಣಿಗೆ ಸಾಗಿತ್ತು. ಮಂಡ್ಯ ವೃತ್ತಕ್ಕೆ ಮೆರವಣಿಗೆ ಆಗಮಿಸುತ್ತಿದ್ದಂತೆ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬರುತ್ತಿದ್ದಂತೆ ಅನ್ಯಕೋಮಿನ ಕೆಲವು ಯುವಕರು ನಮ್ಮ ದರ್ಗಾದ ಬಳಿ ಮೆರವಣಿಗೆ ಮಾಡಬೇಡಿ, ಪಟಾಕಿ, ತಮಟೆ, ನಗಾರಿ ಬಾರಿಸಬೇಡಿ, ಜೈಕಾರ ಕೂಗಬೇಡಿ ಎಂದು ಗಣಪತಿ ಮೆರವಣಿಗೆ ನಡೆಸುತ್ತಿದ್ದ ಯುವಕರಿಗೆ ತಾಕೀತು ಮಾಡಿದ್ದಾರೆ. ಇದನ್ನು ಹಿಂದೂ ಯುವಕರು ಪ್ರಶ್ನಿಸಿದಾಗ ಇದರಿಂದ ರೊಚ್ಚಿಗೆದ್ದ ಅನ್ಯಕೋಮಿನ ಯುವಕರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆರಳಿದ ಹಿಂದೂ ಯುವಕರು ಜೈಶ್ರೀರಾಂ ಎಂದು ಘೋಷಣೆ ಕೂಗಿದ್ದಾರೆ.
ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ತೀವ್ರಗೊಳಿಸಿದ ಪರಿಣಾಮ ಪೊಲೀಸರು ಸೇರಿದಂತೆ ಯುವಕರು ಗಾಯಗೊಂಡಿದ್ದಾರೆ. ಎಚ್ಚೆತ್ತ ಪೊಲೀಸರು ಲಾಠಿ ಬೀಸಿ ಉದ್ರಿಕ್ತ ಗುಂಪನ್ನು ಚದುರಿಸಿದರೂ, ಅನ್ಯಕೋಮಿನ ಯುವಕರು ಲಾಂಗ್ ಮಚ್ಚುಗಳನ್ನು ಹಿಡಿದು ಬೀದಿಗಿಳಿದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಮೆರವಣಿಗೆಯನ್ನು ಸ್ಥಗಿತಗೊಳಿಸಿ ಯುವಕರು ಪೊಲೀಸ್ ಠಾಣೆ ಮುಂದೆ ಗಣೇಶ ಮೂರ್ತಿ ನಿಲ್ಲಿಸಿ ಗಣಪತಿ ಉತ್ಸವ ನಡೆಯಲು ಬಿಡದೇ ವಿನಾಕಾರಣ ನಮ್ಮ ಮೇಲೆ ಹಲ್ಲೆ ಮಾಡಿದ ಅನ್ಯಕೋಮಿನ ಯುವಕರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಗಲಾಟೆಯಲ್ಲಿ ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಹತ್ತಾರು ಮಂದಿ ಗಾಯಗೊಂಡಿದ್ದು ಘಟನೆಯಿಂದ ನಾಗಮಂಗಲ ಪಟ್ಟಣ ಪ್ರಕ್ಷುಬ್ಧಗೊಂಡಿದೆ.
ಇನ್ನು ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಗಣೇಶ ಮೂರ್ತಿ ವಿಸರ್ಜನೆಯ ಮೇಲೆ ಆಕಸ್ಮಿಕವಾಗಿ ಕಲ್ಲು ತೂರಾಟ ನಡೆದಿದೆ. ಈ ಘಟನೆ ನಡೆಯಬಾರದಿತ್ತು. ಇದು ಸಣ್ಣ ಘಟನೆ, ಕೋಮು ಗಲಭೆ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.













