
ಮಹಾರಾಷ್ಟ್ರ: ರಾಜ್ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಶಿಲ್ಪಿ – ಗುತ್ತಿಗೆದಾರ ಜಯದೀಪ್ ಆಪ್ಟೆಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಒಂಬತ್ತು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಆಗಸ್ಟ್ 26 ರಂದು ಕುಸಿದು ಬಿದ್ದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಓರ್ವನನ್ನು ಬಂಧಿಸಲಾಗಿದ್ದು ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದನು. ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು ಆರೋಪಿಯನ್ನು ಥಾಣೆಯ ಕಲ್ಯಾಣ್ ನಿಂದ ಬುಧವಾರ ಬಂಧಿಸಿ ಆರೋಪಿಯನ್ನು ಪ್ರಸ್ತುತ ಉಪ ಪೊಲೀಸ್ ಆಯುಕ್ತರ (ಡಿಸಿಪಿ) ಕಚೇರಿಯಲ್ಲಿ ಇರಿಸಲಾಗಿದೆ.
ವಿಶೇಷವೇನೆಂದರೆ, ದೊಡ್ಡ
ಪ್ರತಿಮೆಗಳನ್ನು ನಿರ್ಮಿಸಿದ ಯಾವುದೇ ಪೂರ್ವ ಅನುಭವವಿಲ್ಲದ ಜಯದೀಪ್ ಆಪ್ಟೆ, ಕಳೆದ ವರ್ಷ ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಸಿಂಧುದುರ್ಗದ ಮಾಲ್ವಾನ್ನಲ್ಲಿರುವ ರಾಜ್ಕೋಟ್ ಕೋಟೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ರಚಿಸುವ ಜವಾಬ್ದಾರಿಯನ್ನು ಪಡೆದುಕೊಂಡಿದ್ದ.













