
ಬೆಂಗಳೂರು: ಗಂಭೀರ ನರಮಂಡಲದ ದೋಷ ಹೊಂದಿದ್ದ 32 ವಾರಗಳ ಭ್ರೂಣದ ಗರ್ಭಪಾತಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ವೈದ್ಯಕೀಯ ಗರ್ಭಪಾತವು ಮಹಿಳೆಯ ದೈಹಿಕ ಸ್ವಾಯತ್ತತೆಗೆ ಸಂಬಂಧಿಸಿದ ಹಕ್ಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ವೈದ್ಯಕೀಯ ಮಂಡಳಿಯ ವರದಿ ಆಧರಿಸಿ ಗರ್ಭಪಾತಕ್ಕೆ ಅನುಮೋದನೆ ನೀಡಿದೆ. ಸಾಮಾನ್ಯವಾಗಿ ಕಾನೂನಿನಡಿ 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶವಿದೆ.
ಪ್ರಕರಣದಲ್ಲಿ 32 ವಾರಗಳ ಗರ್ಭಾವಸ್ಥೆಯ ವೇಳೆ ನಡೆಸಿದ ಸ್ಕ್ಯಾನಿಂಗ್ನಲ್ಲಿ ಭ್ರೂಣಕ್ಕೆ ಗಂಭೀರ ನರಮಂಡಲದ ದೋಷಗಳಿರುವುದು ಪತ್ತೆಯಾಗಿತ್ತು. ಇದರಿಂದ ಗರ್ಭಪಾತಕ್ಕೆ ಅನುಮತಿ ಕೋರಿ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು.
ಹೈಕೋರ್ಟ್ ಸೂಚನೆಯಂತೆ ರಚಿಸಲಾದ ವೈದ್ಯಕೀಯ ಮಂಡಳಿ, ಮಗು ಜನಿಸಿದ ಬಳಿಕ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದ್ದು, ಜೀವನಪೂರ್ತಿ ವೈದ್ಯಕೀಯ ಆರೈಕೆಯ ಅವಲಂಬನೆಯಾಗಬಹುದು ಎಂದು ವರದಿ ನೀಡಿತ್ತು.
ಪೋಷಕರು ಅನುಭವಿಸಬೇಕಾದ ಮಾನಸಿಕ, ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಗಳನ್ನು ಪರಿಗಣಿಸಿದ ನ್ಯಾಯಾಲಯ, ಮಹಿಳೆ ಮತ್ತು ಆಕೆಯ ಪತಿಯ ಅಭಿಪ್ರಾಯದ ಜೊತೆಗೆ ವೈದ್ಯಕೀಯ ವರದಿಯನ್ನು ಗಮನಿಸಿ ಗರ್ಭಪಾತಕ್ಕೆ ಅನುಮತಿ ನೀಡಿದೆ.






























