
ಬೆಂಗಳೂರು/ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಈ ವೇಳೆ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಬಿಜೆಪಿಯವರು ಬೆಂಕಿ ಹಚ್ಚೋದು ಬೇಡ ಎಂದು ಹೇಳಿದ್ದಾರೆ.
ಕೊಲೆ ಕೇಸ್ ಅತ್ಯಂತ ಆಘಾತಕಾರಿ ಘಟನೆ. ಮೊನ್ನೆ ಅಶ್ರಫ್ ಎಂದು ತೀರಿ ಹೋಗಿದ್ದರು. ಇವತ್ತು ಸುಹಾಸ್ ಶೆಟ್ಟಿ ಕೊಲೆ ಆಗಿರುವುದು ಎಲ್ಲರಿಗೂ ಅಘಾತವಾಗಿದೆ. ಇದು ದುರ್ಘಟನೆ. ನಮ್ಮ ಪೊಲೀಸರು ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಕ್ತ ಅವಕಾಶ ಕೊಟ್ಟಿದ್ದೇವೆ. ಪೊಲೀಸರು ಜವಾಬ್ದಾರಿಯಿಂದ ಉತ್ತಮವಾಗಿ ನಿರ್ವಹಣೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮಿನ ವಿಷ ಬೀಜ ಹೋಗಲಾಡಿಸಲು ಎಲ್ಲರೂ ಪ್ರಯತ್ನ ಮಾಡಬೇಕು. ದಕ್ಷಿಣ ಕನ್ನಡದಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಕೆಲಸ ಮಾಡಬೇಕು. ಕೊಲೆ ಮಾಡಿರುವ ತಪ್ಪಿತಸ್ಥರನ್ನ ಬಂಧಿಸುವುದು ಪ್ರಥಮ ಆದ್ಯತೆ. ಪೊಲೀಸರು ಅದನ್ನ ಮಾಡುತ್ತಾರೆ. ಪೊಲೀಸರಿಗೆ ಫುಲ್ ಪವರ್ ಕೊಡ್ತೀವಿ. ಇದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ನಮಗೆ ಎಲ್ಲಾ ಧರ್ಮದವರು, ಜಾತಿಯವರು ಒಂದೇ. ಕಾನೂನಿನ ಮುಂದೆ ಎಲ್ಲರೂ ಒಂದೇ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ನಾಳೆ ಮಂಗಳೂರಿಗೆ ಹೋಗ್ತಿದ್ದೀನಿ. ಗೃಹ ಸಚಿವರ ಜೊತೆ ಮಾತಾಡಿದ್ದು, ಅವರು ಎಲ್ಲಾ ನಿಯಂತ್ರಣ ಮಾಡುತ್ತಿದ್ದಾರೆ. ಸಿಎಂ ಜೊತೆ ಮಾತಾಡಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡುತ್ತೀವಿ ಎಂದು ಹೇಳಿದರು.













