
ಉಡುಪಿ: ರಾಜ್ಯ ಸರ್ಕಾರವು ಕರ್ನಾಟಕ ಕರಾವಳಿ ಭದ್ರತೆಗೆ ಇಂಧನ ಕಡಿತ ಆದೇಶ ಹೊಡೆತ ನೀಡಿದ್ದು ಇಲ್ಲಿಯವರೆಗೆ ಬೋಟ್ಗೆ ಮಾಸಿಕ 600 ಲೀಟರ್ ಇಂಧನ ಪೂರೈಕೆ ಮಾಡಲಾಗುತ್ತಿದ್ದು ಇನ್ನು ಮುಂದೆ ಈ ಪ್ರಮಾಣವನ್ನು ಕೇವಲ 250 ಲೀಟರ್ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಿದೆ.
ಅರ್ಧಕ್ಕಿಂತ ಜಾಸ್ತಿ ಇಂಧನ ಪ್ರಮಾಣ ಇಳಿಸಿದ್ದು ಕರ್ನಾಟಕದ ಭದ್ರತೆಯ ವಿಚಾರದಲ್ಲಿ ಸರ್ಕಾರದ ಜಿಪುಣತನ ಸರಿಯಾ ಎನ್ನುವ ಪ್ರಶ್ನೆ ಎದುರಾಗಿದೆ.
ಕರಾವಳಿ ಕಾವಲು ಪೊಲೀಸ್ ಪಡೆ ರಾಜ್ಯ ಕರಾವಳಿ ತೀರದ ಮೂರು ಜಿಲ್ಲೆಯ ಗಡಿಯನ್ನು ಕಾಯುವ ಕೆಲಸ ಮಾಡುತ್ತದೆ. ಸಮುದ್ರದ ಮೂಲಕ ನಡೆಯಬಹುದಾದ ಸಂಭಾವ್ಯ ಅನಾಹುತ ತಡೆಯೋದು ಇಲಾಖೆಯ ಕೆಲಸವಾಗಿದ್ದು ಅಕ್ರಮ ನಡೆಯದಂತೆ, ಕಾನೂನು ಬಾಹಿರ ಕೃತ್ಯಗಳು ಸಮುದ್ರ ಮುಖೇನ ಘಟಿಸದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ದಿನಕ್ಕೆ 10 ತಾಸಿನವರೆಗೂ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪೊಲೀಸರು ಈಗ ಕೇವಲ ಒಂದು ಗಂಟೆ ಸಮುದ್ರದಲ್ಲಿ ಗಸ್ತು ತಿರುಗೋ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕಾರವಾರದಲ್ಲಿ ಕಾರ್ಯಚರಿಸುವ ಎಲ್ಲಾ ಇಲಾಖೆಯ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಪ್ರಮಾಣದಲ್ಲಿ ಶೇಕಡ 50 ಲೀಟರ್ ಕಡಿತಗೊಳಿಸಲಾಗಿದೆ. ಮೂರು ಜಿಲ್ಲೆಯಲ್ಲಿ 9 ಸ್ಟೇಷನ್ಗಳಿದ್ದು, ಸಮುದ್ರದಲ್ಲಿ 15 ಬೋಟ್ಗಳಲ್ಲಿ ಗಸ್ತಿನಲ್ಲಿವೆ. ಸರ್ಕಾರದ ಹೊಸ ಆದೇಶದಿಂದ ಮೀನುಗಾರರ ಮಾಹಿತಿಯನ್ನು ಪೊಲೀಸರು ಅವಲಂಬಿಸಬೇಕಾಗಿದೆ.



















