
ಕಾರ್ಕಳ, ಜುಲೈ 29: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 29/07/2026 ಬುಧವಾರದಂದು ಗುರುಪೂರ್ಣಿಮೆ ಪ್ರಯುಕ್ತ ಗುರುಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು .
ಈ ಸಂದರ್ಭದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪಾದಪೂಜೆ ನೆರವೇರಿಸಿ ಗುರು-ಹಿರಿಯರ ಗೌರವದ ಮಹತ್ವವನ್ನು ಸಾರಿದರು.
ಕಾರ್ಯಕ್ರಮಕ್ಕೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಟ್ರಸ್ಟ್ ಇದರ ಪ್ರತಿನಿಧಿಗಳಾದ ಆನಂದ್ ಜೀ ಅವರು ಆಗಮಿಸಿದರು. ಮುಖ್ಯ ಅತಿಥಿಗಳಾಗಿ ಪ್ರಸ್ತುತ ಪೆರ್ವಾಜೆ ಸರಕಾರಿ ಪ್ರೌಢ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಕೃಷ್ಣಪ್ಪ ಅವರು ಆಗಮಿಸಿ, ವಿದ್ಯಾರ್ಥಿಗಳ ಜೀವನದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ಮಾರ್ಗದರ್ಶನವೇ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಆಧಾರವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಶಾಲು ಹೊದಿಸಿ ಫಲ-ಪುಷ್ಪಗಳನ್ನು ನೀಡಿ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಅತಿಥಿಗಳು ಸತ್ಸಂಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಡಾ. ಪ್ರಶಾಂತ್ ಹೆಗ್ಡೆ, ಕೋಶಾಧಿಕಾರಿಗಳಾದ ದಿನೇಶ್ ಕಾಮತ್ ದಂಪತಿಗಳು, ಆಡಳಿತ ಮಂಡಳಿ ಸದಸ್ಯರಾದ ಕೀರ್ತನ್ ಶೆಣೈ, ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್. ಕಾಮತ್, ಪೋಷಕರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹತ್ತನೇ ತರಗತಿಯ ವಿದ್ಯಾರ್ಥಿನಿ ದಿಶಾ ಸ್ವಾಗತಿಸಿದರು. ಕೆ. ಭರತ್ ಪ್ರಭು ವಂದಿಸಿದರು ಹಾಗೂ ಅನ್ಶಿ ಎಸ್. ಅಂಚನ್ ಕಾರ್ಯಕ್ರಮವನ್ನು ನಿರೂಪಿಸಿದರು.






















































