
ಬಂಟ್ವಾಳ: ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ವಿಹಿಂಪ ಮುಂದಾಳು ಶರಣ್ ಪಂಪುವೆಲ್ ಗೆ ಸವಾಲು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿ.ಸಿ.ರೋಡಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಸೇರಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಡಲಾಗಿದೆ.
ಶರಣ್ ಪಂಪುವೆಲ್ ಆಗಮಿಸಿದ್ದು ಈ ವೇಳೆ ಪೊಲೀಸ್ ಸರ್ಪಗಾವಲನ್ನು ಲೆಕ್ಕಿಸದೆ ನುಗ್ಗಿದ ಕಾರ್ಯಕರ್ತರು, ಘಟನೆಯಿಂದ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ.
ಈ ಕುರಿತು ಹೇಳಿಕೆ ನೀಡಿದ ಶರಣ್ ಪಂಪ್ ವೆಲ್ ಹಿಂದೂ ಸಂಘಟನೆಗೆ ಇಂತಹ ಸವಾಲು ಹೊಸತೇನಲ್ಲ. ಆದರೆ ಆತನ ಸವಾಲಿಗೆ ಉತ್ತರ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಆತ ಹೇಳಿದಂತೆ ಅವಶ್ಯಕತೆ ಬಿದ್ದರೆ ಮಸೀದಿಗೆ ಹೋಗುವುದಕ್ಕೂ ಸಿದ್ಧರಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವ ಮೂಲಕ ಹಿಂದುತ್ವದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.
ಈದ್ ಮಿಲಾದ್ ರ್ಯಾಲಿಯ ಮೇಲೆ ದಾಳಿ ಮಾಡಿದರೆ ಏನಾಗಬಹುದು ಎಂದು ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರು ಸವಾಲು ಹಾಕಿರುವ ವಾಯ್ಸ್ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸೆ. 16ರಂದು ಬಿ.ಸಿ.ರೋಡಿನ ಕೈಕಂಬದಲ್ಲಿ ನಡೆಯುವ ಮಿಲಾದ್ ರ್ಯಾಲಿ ಸಂದರ್ಭ ಬಂದು ನಿಲ್ಲುವಂತೆ ಸವಾಲು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದು ವೈರಲ್ ಆಗಿದ್ದು, ಈ ಬಗ್ಗೆ ಹಿಂದೂ ನಾಯಕರು, ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಕೋಮು ಸೌಹಾರ್ದ ಹಾಳುಗೆಡುವ ಉದ್ದೇಶದಿಂದಲೇ ಈ ರೀತಿಯ ಸವಾಲಿನ ಆಡಿಯೋ ಸಂದೇಶ ಹಾಕಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.













