ಕಾರ್ಕಳ ತಹಶಿಲ್ದಾರ್ ಕಚೇರಿಯಲ್ಲಿ, ವಾಲ್ಮೀಕಿ ಜಯಂತಿ ಆಚರಣೆ

ವಾಲ್ಮೀಕಿಯವರಂತೆ ಮನಃ ಪರಿವರ್ತನೆ ಮಾಡಿಕೊಂಡು ಸದ್ಗಗುಣವಂತರಾಗಲು ಎಲ್ಲರಿಗೂ ಸಾಧ್ಯವಿದೆ. ಹಾಗೂ ಜಗತ್ತಿನ ಪ್ರಥಮ ಕಾವ್ಯ ರಚನೆಕಾರರಾದ ವಾಲ್ಮೀಕಿಯವರ ಹಿರಿಮೆ ಎಂದೆಂದಿಗೂ ಪ್ರಾಥಃಸ್ಮರಣೀಯ ಎಂದು ತಹಶಿಲ್ದಾರ್ ಪ್ರತಿಭಾ ಆರ್ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ತಿಳಿಸಿದರು.
ಇಂದು ಕಾರ್ಕಳ ತಹಶಿಲ್ದಾರ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಮಾತನಾಡಿದ ತಹಶಿಲ್ದಾರ್ ಪ್ರತಿಭಾ ಆರ್ ರವರು ರತ್ನಾಕರನಾಗಿ ಡಕಾಯಿತಿಯಲ್ಲಿ ತೊಡಗಿದ್ದ ಮನುಷ್ಯನೊಬ್ಬ ಮನಃಪರಿವರ್ತನೆ ಹೊಂದಿ ಧ್ಯಾನಾಸಕ್ತನಾಗಿ ಭಗವಂತನ ನಾಮಸ್ಮರಣೆಯ ಮೂಲಕ ಆದಿಕವಿಯಾಗಿ ರೂಪುಗೊಂಡು ಜಗತ್ತಿಗೇ ಅತ್ಯದ್ಭುತ ರಾಮಾಯಣವನ್ನು ನೀಡಿದ ಕತೆ ಎಂದೆಂದಿಗೂ ಸ್ಪೂರ್ತಿದಾಯಕ ಹೇಳಿದರು.
ಜಗತ್ತಿನ ಮಹಾಕಾವ್ಯ ರಾಮಾಯಣದ ಮೂಲ ಕರ್ತೃ ವಾಲ್ಮೀಕಿಯವರು. ಅವರ ನಂತರ ಅದೆಷ್ಟೋ ಜನ ರಾಮಾಯಣ ಬರೆದರೂ ಎಲ್ಲಕ್ಕೂ ಮೂಲ ಆಧಾರ ವಾಲ್ಮೀಕಿ ರಾಮಾಯಣವೇ ಆಗಿದೆ.
ಕ್ರೌಂಚ ಪಕ್ಷಿಗಳು ತಮ್ಮ ಪ್ರೇಮಸಲ್ಲಾಪದ ಸಂದರ್ಭದಲ್ಲೇ ಬೇಟೆಗಾರನ ಬಾಣದಿಂದ ಕೊಲ್ಲಲ್ಪಟ್ಟಾಗ ನೊಂದು ವಾಲ್ಮೀಕಿಯವರ ಬಾಯಿಂದ ಬಂದ ಶಾಪ ನೀಡುವ ದ್ವಿಪದಿ ಸಂಸ್ಕೃತ ಶ್ಲೋಕ ಇಂದಿಗೂ ಪ್ರಥಮ ಪದ್ಯವೆಂದು ಪರಿಗಣಿತವಾಗಿ ಅವರನ್ನು ಆದಿಕವಿ ಎಂದು ಕರೆಯಲಾಗುತ್ತದೆ. ಈ ಮೂಲಕ ಜಗತ್ತಿಗೆ ಪ್ರೇಮದ ದಿವ್ಯ ಸಂದೇಶವನ್ನು ವಾಲ್ಮೀಕಿ ನೀಡುತ್ತಾರೆ.
ಪರಿತ್ಯಕ್ತಳಾದ ಗರ್ಭಿಣಿ ಸೀತಾಮಾತೆಗೆ ಆಶ್ರಯದಾತರಾಗುತ್ತಾರೆ. ಲವ-ಕುಶರಿಗೆ ಗುರುಗಳಾಗಿ ರಾಮಾಯಣವನ್ನೂ ಹೇಳಿಕೊಡುತ್ತಾರೆ.
ಇಂತಹ ಮಹಾನ್ ವ್ಯಕ್ತಿಯ ಜಯಂತಿ ಸಾರ್ಥಕತೆ ಹೊಂದಬೇಕಾದರೆ ಮಹರ್ಷಿಯವರು ರಾಮಾಯಣದ ಮೂಲಕ ನೀಡಿರುವ ಪಿತೃ ವಾಕ್ಯ ಪರಿಪಾಲನೆ, ಪಿತೃದೇವೋಭವ, ಮಮತೆ, ಸಮತೆ, ಭ್ರಾತೃತ್ವ ತ್ಯಾಗ ದೇಶಪ್ರೇಮ, ಅಳಿಲುಸೇವೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ತಹಶಿಲ್ದಾರ್ ಕರೆ ನೀಡಿದರು.
ಇಂದಿನ ಯುವ ಜನತೆಗೆ ಒಳ್ಳೆಯ ಹಾದಿಯಲ್ಲಿ ನಡೆಯಲು ಅದ್ಭುತ ಸಂದೇಶವನ್ನು ಮಹರ್ಷಿ ನೀಡಿದ್ದಾರೆ.
ತಹಶಿಲ್ದಾರ್ ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಘವೇಂದ್ರ ಉಪ ತಹಶಿಲ್ದಾರ್ ಮಂಜುನಾಥ್, ಹಾಗೂ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.













