ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಕಂಬನಿ

ಕಾರ್ಕಳ : ಡಿ.ಆರ್.ರಾಜು ನಿಧನ ಎಂಬ ಸುದ್ದಿಯನ್ನು ಕೇಳಿದಾಗ ಬರಸಿಡಿಲು ಬಡಿದಂತಾಯಿತು. ನಿನ್ನೆ ರಾತ್ರಿಯವರೆಗೂ ಲವಲವಿಕೆಯಿಂದ ಓಡಾಡಿಕೊಂಡಿದ್ದ ಏನೇನೋ ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಸಾಕಾರಗೊಳಿಸಲು ಪಾದರಸದಂತೆ ಓಡಾಡಿಕೊಂಡಿದ್ದ ರಾಜಣ್ಣ ಇನ್ನಿಲ್ಲ ಎನ್ನುವುದನ್ನು ನಂಬುವುದೇ ಕಷ್ಟವಾಗುತ್ತಿದೆ. ಆದರೆ ಕಾಲನ ಕರೆಗೆ ಅವರು ಓಗೊಟ್ಟಿದ್ದಾರೆ ಎನ್ನುವುದು ಈಗ ನಮ್ಮ ಮುಂದಿರುವ ಕಟುವಾಸ್ತವ. ಅವರ ಅಗಲಿಕೆಗೆ ಯಾವ ರೀತಿ ಶ್ರದ್ದಾಂಜಲಿ ಅರ್ಪಿಸುವುದು ಎನ್ನುವುದೇ ಅರಿಯದಾಗಿದೆ. ಯಾಕೆಂದರೆ ಯಾವ ಶಬ್ದಕ್ಕೂ ಅವರ ಘನ ವ್ಯಕ್ತಿತ್ವವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಇನ್ನೊಮ್ಮೆ ಹುಟ್ಟಿಬನ್ನಿ ರಾಜಣ್ಣ ಎಂದಷ್ಟೇ ಹೇಳಿ ನಾವು ಈಗ ನಮ್ಮನ್ನು ಸಮಾಧಾನ ಮಾಡಿಕೊಳ್ಳಬೇಕಷ್ಟೆ.
ಹೀಗೆಂದು ಅಗಲಿದ ಗೆಳೆಯ ಡಿ.ಆರ್.ರಾಜು ಅವರಿಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ, ಧಾರ್ಮಿಕ, ಸಮಾಜ ಸೇವೆ, ಉದ್ಯಮ, ಸಂಘಟನೆ, ಕಲೆ, ಸಾಹಿತ್ಯ, ರಾಜಕೀಯ…ಹೀಗೆ ಸರ್ವ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ, ಆ ಜನಮಾನಸದಲ್ಲಿ ತನ್ನ ಅಚ್ಚಳಿಯದ ಛಾಪನ್ನು ಮೂಡಿಸಿದ್ದ ಡಿ.ಆರ್. ರಾಜು ಅವರ ಅಗಲಿಕೆ ನಿಜಾರ್ಥದಲ್ಲಿ ಸಮಾಜಕ್ಕಾದ ಭಾರಿ ನಷ್ಟ. ಬಡವರ ಕುರಿತಾಗಿ ಅವರಿಗಿದ್ದ ಕಾಳಜಿ ಅಪಾರವಾದದ್ದು. ತನ್ನ ಗಳಿಕೆಯ ದೊಡ್ಡ ಪಾಲೊಂದನ್ನು ಅವರು ಸಮಾಜಕ್ಕಾಗಿ ವಿನಿಯೋಗಿಸುತ್ತಿದ್ದರು. ಆದರೆ ಈ ಸೇವೆಯ ಹಿಂದೆ ಅವರಿಗೆ ಯಾವ ಸ್ವಾರ್ಥ ಭಾವವೂ ಇರಲಿಲ್ಲ. ಹೀಗಾಗಿ ತನ್ನ ಬಲಗೈ ಕೊಟ್ಟದ್ದು ಎಡಗೈಗೆ ತಿಳಿಯದಷ್ಟು ಎಚ್ಚರವಹಿಸುತ್ತಿದ್ದರು. ದಾನ ಧರ್ಮಗಳು ಪ್ರಚಾರದ ಸರಕಲ್ಲ ಎಂಬುದನ್ನು ಅವರನ್ನು ನೋಡಿ ತಿಳಿದುಕೊಳ್ಳಬೇಕು. ಮೃದು ಭಾಷಿಯಾದ ರಾಜಣ್ಣನವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಸಮಾಜಕ್ಕೆ ಭಗವಂತ ಕೊಡಲಿ ಎನ್ನುವುದೊಂದೇ ಪ್ರಾರ್ಥನೆ ಎನ್ನುತ ಡಾಕ್ಟರ್ ಸುಧಾಕರ್ ಶೆಟ್ಟಿ ಕಂಬನಿ ಮಿಡಿದಿದ್ದಾರೆ.



















