
ಹೆಬ್ರಿ :ಶಿವಮೊಗ್ಗದ ಊರಗಡೂರು ಶ್ರೀ ಗುಡ್ಡೆಮರಡಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆದ ದೀಪೋತ್ಸವದ ಅಂಗವಾಗಿ ಹೆಬ್ರಿ ತಾಲ್ಲೂಕು ಮುದ್ರಾಡಿ ಗ್ರಾಮದ ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಭಜನಾ ಮಂಡಳಿ ಮತ್ತು ಮಹಿಳಾ ಭಜನಾ ಮಂಡಳಿ ಹಾಗೂ ವರಂಗ ಗ್ರಾಮದ ಅಡ್ಕ ಶ್ರೀ ಚತುರ್ಮುಖ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಮತ್ತು ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಕುಣಿತ ಭಜನಾ ಸೇವೆ ನಡೆಯಿತು. ಶಿವಮೊಗ್ಗದ ಊರಗಡೂರು ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕುಣಿತ ಭಜನೆಗೆ ಚಾಲನೆ ನೀಡಲಾಯಿತು . ಅಲ್ಲಿಂದ ವಿನಾಯಕ ದೇವಸ್ಥಾನಕ್ಕೆ ತಲುಪಿ ದೇವರ ದರ್ಶನ ಮಾಡಿ , ಅಲ್ಲಿಂದ 2 ಕಿ. ಮೀ. ದೂರದಲ್ಲಿರುವ ಬೆಟ್ಟದ ತುದಿಯಲ್ಲಿರುವ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದವರೆಗೆ ದಾಸರ ಭಜನೆಗಳನ್ನು ಹಾಡುತ್ತಾ ಕುಣಿತ ಭಜನೆ ಸಾಗಿತು.ನೂರಾರು ಭಕ್ತರು ಪಾಲ್ಗೊಂಡಿದ್ದರು. ಅನಂತರ ಶ್ರೀ ದೇವರಿಗೆ ದೀಪೋತ್ಸವ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವಕೃಷ್ಣ ,ಖಜಾಂಚಿ ಶಿವನಂಜಪ್ಪ, ಕಾರ್ಯದರ್ಶಿ ಸತೀಶ್ ಪಟೇಲ್,ಪ್ರಧಾನ ಅರ್ಚಕ ಶ್ರೀನಿವಾಸ ಐತಾಳ್, ಬಲ್ಲಾಡಿ ಭಜನಾ ಮಂಡಳಿಯ ಅಧ್ಯಕ್ಷರಾದ ವಸಂತ್ ಕುಲಾಲ್, ಮಹಿಳಾ ಭಜನಾ ಮಂಡಳಿಯ ವೀಣಾ, ಅಡ್ಕ ಭಜನಾ ಮಂಡಳಿಯ ಅಧ್ಯಕ್ಷರಾದ ಸುಧೀರ್ ಕುಲಾಲ್ ಮತ್ತು ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾದ ಸುಂದರಿ ಕುಲಾಲ್ ಮತ್ತು ಸರ್ವಸದಸ್ಯರು, ಶಿವಮೊಗ್ಗ ಊರಗಡೂರು ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಅವರ ಸಂಯೋಜನೆಯಲ್ಲಿ ಭಜನಾ ಕಾರ್ಯಕ್ರಮ ಜರುಗಿತು.



















