
ಬಂಟ್ವಾಳ: ಬಿ.ಸಿ.ರೋಡ್ನ ಹೊಸ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಭೀಕರ ಘಟನೆಗೆ 22 ವರ್ಷದ ಲಾವಣ್ಯ ಬಲಿಯಾಗಿದ್ದಾರೆ. ಕೇಳಿ ಗ್ರಾಮದ ಕಕ್ಯಪದವು ಸಮೀಪದ ಕೊಡಂಗೆ ನಿವಾಸಿಯಾಗಿದ್ದ ಲಾವಣ್ಯ ಅವರನ್ನು ದೂರದ ಸಂಬಂಧಿ ಚೇತನ್ ತಲವಾರಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಲಾವಣ್ಯ ಅವರ ಸಹೋದರಿಯ ಪತಿ ಗೌತಮ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಎಫ್ಐಆರ್ನಲ್ಲಿ ಏನಿದೆ?
ಲಾವಣ್ಯ ಹಾಗೂ ಅವರ ಅಕ್ಕ ಚೈತ್ರಾ ಕಲ್ಲಡ್ಕದ ಪುಷ್ಪರಾಜ್ ನರ್ಸಿಂಗ್ ಹೋಮ್ನಲ್ಲಿ ನರ್ಸಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನ ಲಾವಣ್ಯ ಹಗಲು ಪಾಳಿ ಮುಗಿಸಿ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಮನೆಗೆ ತೆರಳಲು ಬಸ್ ಏರಿದ್ದ ವೇಳೆ ಚೇತನ್ ಕಿರುಕುಳ ನೀಡುತ್ತಿದ್ದಾನೆ ಎಂದು ಚೈತ್ರಾ ತಮ್ಮ ಪತಿ ಗೌತಮ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಕೂಡಲೇ ಗೌತಮ್ ತಮ್ಮ ಸ್ನೇಹಿತ ಅಜಯ್ಗೆ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದರು.
ಸ್ವಲ್ಪ ಸಮಯದ ಬಳಿಕ ಅಜಯ್ ಕರೆ ಮಾಡಿ, ಬಸ್ ನಿಲ್ದಾಣದಲ್ಲೇ ಲಾವಣ್ಯ ಹತ್ಯೆಯಾಗಿರುವ ವಿಷಯ ತಿಳಿಸಿದರು. ಗೌತಮ್ ಸ್ಥಳಕ್ಕೆ ಧಾವಿಸಿದಾಗ ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಯಲ್ಲಿ ಲಾವಣ್ಯ ಅವರ ತಲೆಯ ಹಿಂಭಾಗದಲ್ಲಿ ಆಳವಾದ ಗಾಯ ಕಂಡುಬಂದಿದ್ದು, ಘಟನಾ ಸ್ಥಳದಲ್ಲಿ ತಲವಾರು, ರಕ್ತದ ಕಲೆ ಹಾಗೂ ಬ್ಯಾಗ್ ಪತ್ತೆಯಾಗಿರುವುದಾಗಿ ಅಜಯ್ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಚೇತನ್ ಕೆಲಕಾಲದಿಂದ ಲಾವಣ್ಯ ಅವರನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಆಕೆ ನಿರಾಕರಿಸಿದ್ದರಿಂದ ದ್ವೇಷ ಬೆಳೆಸಿಕೊಂಡ ಆತ, ಲಾವಣ್ಯ ಕೆಲಸ ಮುಗಿಸಿ ಬಸ್ ನಿಲ್ದಾಣಕ್ಕೆ ಬರುವುದನ್ನು ತಿಳಿದು ತಲವಾರು ಹಿಡಿದು ಬಂದು, ಹಿಂಬಾಲಿಸಿ ತಲೆಗೆ ಮಾರಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.















































