
ಮಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದಲ್ಲಿ ಮೃತ ಕಾರ್ತಿಕ್ ತಾಯಿ ಶ್ಯಾಮಲಾ ಭಟ್, ಸಹೋದರಿ ಕಣ್ಮಣಿ ಎಂಬವರನ್ನು ಮುಲ್ಕಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ ಭಟ್ ಆತ್ಮಹತ್ಯೆಗೆ ಮೊದಲು ಕೌಟುಂಬಿಕ ಕಲಹದ ಬಗ್ಗೆ ಡೆತ್ ನೋಟ್ ಬರೆದಿದ್ದ. ನಮ್ಮ ಸಂಸಾರ ಹಾಳು ಮಾಡಿದ್ದೇ ತಂದೆ, ತಾಯಿ, ಸಹೋದರಿ. ಇಂತಹ ತಂದೆ, ತಾಯಿ ಯಾರಿಗೂ ಸಿಗಬಾರದು. ನಮ್ಮ ಅಂತ್ಯಸಂಸ್ಕಾರವನ್ನು ಅತ್ತೆ ಮಾವ ನಡೆಸಿಕೊಡಬೇಕು ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾನೆ.
ಪ್ರಿಯಾಂಕ ಪೋಷಕರು ಕಾರ್ತಿಕ್ ತಂದೆ ತಾಯಿ ಹಾಗೂ ಸಹೋದರಿ ವಿರುದ್ಧ ದೂರು ನೀಡಿದ್ದು ಕಾರ್ತಿಕ್ ಕೊಲೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅತ್ತೆ ಮಾವ ಕಿರುಕುಳದಿಂದಲೇ ಈ ದುರಂತ ನಡೆದಿದೆ. ಸೂಕ್ತ ತನಿಖೆ ನಡೆಸುವಂತೆ ಮೃತ ಪ್ರಿಯಾಂಕಾ ಪೋಷಕರು ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆ:
ಸಹಕಾರಿ ಬ್ಯಾಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಭಟ್ (32) ತನ್ನ ಪತ್ನಿ ಪ್ರಿಯಾಂಕ (28) ಹಾಗೂ ಮಗು ಹೃದಯ್ನನ್ನು (4) ಹತ್ಯೆಗೈದು ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಪತ್ನಿಗೆ ಅತ್ತೆ ಮಾವನೊಂದಿಗೆ ಮನಸ್ತಾಪ ಇದ್ದ ಹಿನ್ನೆಲೆ ಕಾರ್ತಿಕ್ ಕುಟುಂಬ ಮನೆಯ ಕೋಣೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಾರ್ತಿಕ್ ತಂದೆ ಜನಾರ್ದನ ಭಟ್ ಪಕ್ಷಿಕೆರೆ ಜಂಕ್ಷನ್ನಲ್ಲಿ ಹೋಟೆಲ್ ನಡೆಸಿಕೊಂಡಿದ್ದು, ಎಂದಿನಂತೆಯೇ ನ.9ರಂದು ಹೋಟೆಲ್ಗೆ ತೆರಳಿದ್ದರು. ಈ ವೇಳೆ ಹೆಂಡತಿ ಮಗುವನ್ನು ಕಾರ್ತಿಕ್ ಹತ್ಯೆ ಮಾಡಿದ್ದ. ಹತ್ಯೆಯ ಬಳಿಕ ಮಧ್ಯಾಹ್ನದ ವೇಳೆಗೆ ರೈಲಿಗೆ ತಲೆ ಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.



















