ಮೊಬೈಲ್ ಗೀಳು, ಡ್ರಗ್ಸ್ ಗಳಂತವು ಗಳಿಂದ ದೂರವಾಗಬೇಕೆಂಬ ಕಲ್ಪನೆ ನಮ್ಮ ನಮ್ಮಲ್ಲಿಯೇ ಮೂಡಬೇಕು: ಡಾ.ಪಿ.ವಿ.ಭಂಡಾರಿ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯ ಗೀಳು, ದುಶ್ಚಟಗಳು ಹಾಗೂ ಪರೀಕ್ಷಾ ತಯಾರಿಯಲ್ಲಿ ಎದುರಾಗುವ ತೊಡಕುಗಳ ಕುರಿತು ತರಬೇತಿ ಕಾರ್ಯಕ್ರಮ.ಹಮ್ಮಿಕೊಳ್ಳಲಾಗಿತ್ತು.
ಪ್ರಖ್ಯಾತ ಮನೋತಜ್ಞರಾದ ಉಡುಪಿಯ ವೈಕುಂಠ ಬಾಳಿಗಾ ಆಸ್ಪತ್ರೆಯ ಡಾ.ಪಿ.ವಿ.ಭಂಡಾರಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ಅತಿಯಾದ ಮೊಬೈಲ್ ಗೀಳು, ಡ್ರಗ್ಸ್ ಚಟ ಹಾಗೂ ಇನ್ನಿತರ ಯಾವುದೇ ದುರಭ್ಯಾಸಗಳಿಂದ ದೂರವಾಗಬೇಕೆಂಬ ಕಲ್ಪನೆ ನಮ್ಮಲ್ಲಿಯೇ ಮೂಡಬೇಕು. ಆಗ ಮಾತ್ರ ಅದರಿಂದ ಮುಕ್ತವಾಗಲು ಸಾಧ್ಯ. ಹದಿ ಹರೆಯದಲ್ಲಿ ಸಮಸ್ಯೆಗಳು ಸ್ವಾಭಾವಿಕ. ಪೂರ್ವ ಸಿದ್ಧತೆ ಇಲ್ಲದೆ ಯಾವುದೇ ಕೆಲಸದಲ್ಲಿ ತೊಡಗಬಾರದು. ಮಕ್ಕಳು ಹೆಚ್ಚು ಹೆಚ್ಚು ಭಾವನಾತ್ಮಕ ಮನೋಸ್ಥಿತಿಗೆ ತಲುಪದೆ ಮಾನಸಿಕವಾಗಿ ಬಲಿಷ್ಟರಾಗುವುದರ ಕಡೆ ಗಮನ ಕೊಡಬೇಕು. ಪಠ್ಯ ಮತ್ತು ಪಠ್ಯೇತರ ಎರಡರಲ್ಲೂ ತೊಡಗಿಸಿಕೊಂಡಾಗ ಶ್ರಮದ ಮನಸ್ಥಿತಿ ಮೂಡುತ್ತದೆ” ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಸಿದ್ಧತೆಯ ಕುರಿತಾಗಿ ಸಂವಾದ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಪ್ರಾಚಾರ್ಯರಾದ ಲಕ್ಷ್ಮೀ ನಾರಾಯಣ ಕಾಮತ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಪ್ರಸ್ತಾವನೆಗೈದರು. ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಸಮಾಲೋಚಕಿ ಸಿ.ಡಾ.ಶಾರ್ಲೆಟ್ ಸಿಕ್ವೇರಾ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಆಂಗ್ಲಭಾಷಾ ಉಪನ್ಯಾಸಕಿಯರಾದ ಶ್ರೀಮತಿ ಪಾವನಾ ಧನ್ಯರಾಜ್ ಸ್ವಾಗತಿಸಿ, ಶ್ರೀಮತಿ ಶಿಜಿ ಸಿ.ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.













