
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಿವೇದಿತಾ ಪ್ರೌಢಶಾಲೆ ಬಸ್ರೂರು, ಕುಂದಾಪುರ ಇಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕಿಯರ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ವಿಭಾಗದಿಂದ ಏಳನೇ ತರಗತಿಯ ಫಿಯೋನಾ ರಿಯಾ ಪಿಂಟೋ ಹಾಗೂ ಪ್ರೌಢಶಾಲಾ ವಿಭಾಗದಿಂದ ಎಂಟನೇ ತರಗತಿಯ ರಿತು ಫ್ರಾನ್ಸಿಸ್, ಸಾನ್ವಿ ಎಂ ನಾಯಕ್ ಚಿನ್ನದ ಪದಕಗಳನ್ನು ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಮುಂದೆ ರಾಮನಗರದಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಉಳಿದಂತೆ ಬಾಲಕಿಯರ ವಿಭಾಗದಲ್ಲಿ ಏಳನೇ ತರಗತಿಯ ಐಶ್ವರ್ಯ ಪೂಜಾರಿ ಹಾಗೂ ಒಂಬತ್ತನೇ ತರಗತಿಯ ರೇಚಲ್ ಡಿಸೋಜ ದ್ವಿತೀಯ ಸ್ಥಾನ, ಎಂಟನೇ ತರಗತಿಯ ಆಯುಶ್ರೀ ಎಂ ಆಚಾರ್ಯ ತೃತೀಯ ಸ್ಥಾನ ಪಡೆದುಕೊಂಡರೆ ಬಾಲಕರ ವಿಭಾಗದಲ್ಲಿ ಏಳನೇ ತರಗತಿಯ ಸಾಕ್ಷಿತ್ ಪಿ. ಜೈನ್, ಮೊಹಮ್ಮದ್ ಹಿಶಾಮ್ ಖಾನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಕು.ಲಾವಣ್ಯ ಶೆಟ್ಟಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್ ಹಾಗೂ ಕೃಷ್ಣಪ್ರಸಾದ್ ತಂಡಗಳ ನೇತೃತ್ವ ವಹಿಸಿದ್ದರು.













