
ಕಾರ್ಕಳ: ದಿನಾಂಕ ಏಪ್ರಿಲ್ 21 ಮಂಗಳವಾರದಂದು ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದಲ್ಲಿ ಶ್ರೀದೇವಿಯ ವಾರ್ಷಿಕ ಜಾತ್ರೆ ಮತ್ತು ಪ್ರತಿಷ್ಠಾ ವರ್ಧಂತಿ ಹಾಗೂ ಚಂಡಿಕಾ ಹೋಮ ನಡೆಯಲಿದೆ.
ಕಾರ್ಕಳ ತಾಲೂಕಿನ ಬೈಲಡ್ಕ ಕುಂಟಲ್ಪಾಡಿ ಸಮೀಪದ ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ. ಬೆಳಗ್ಗೆ 9:00ಕ್ಕೆ ಚಂಡಿಹೋಮ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ನಂತರ 1:00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6:00ರಿಂದ ಭಜನಾ ಕಾರ್ಯಕ್ರಮಗಳು ಆರಂಭವಾಗಲಿದ್ದು, ರಾತ್ರಿ 7:00ಕ್ಕೆ ಗದ್ದುಗೆ ಪೂಜೆ ನೆರವೇರಿಸಲಾಗುತ್ತದೆ. ಬಳಿಕ 7:30ರಿಂದ ಅಂಬಾಭವಾನಿ ಗಾಲಿಮಾರಿ ದೇವಸ್ಥಾನ ಹಾಗೂ ಸ್ಥಳೀಯ ಪ್ರತಿಭೆಗಳಿಂದ ‘ಸಾಂಸ್ಕೃತಿಕ ಕಾರ್ಯಕ್ರಮ’ ಹಾಗೂ ಸ್ಥಳೀಯರಿಂದ ಅಂಬಾಭವಾನಿ ದೇವಿಯ ಪವಾಡ ಕಥೆಯನ್ನೊಳಗೊಂಡ ‘ಜೈ ಭವಾನಿ’ ಎಂಬ ತುಳು ಪೌರಾಣಿಕ ನಾಟಕ ನಡೆಯಲಿದೆ. ರಾತ್ರಿ 10:30 ರಿಂದ ಮಾರಿ ಪೂಜೆ ನೆರವೇರಲಿದೆ.
ಈ ಮಹೋತ್ಸವದಲ್ಲಿ ಭಾಗವಹಿಸಲು ಭಕ್ತರನ್ನು ದೇವಸ್ಥಾನ ಸಮಿತಿ ಆಹ್ವಾನಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಆಶೀರ್ವಾದ ಪಡೆಯುವಂತೆ ವಿನಂತಿಸಲಾಗಿದೆ.
ಸೂಚನೆ: ದೇವಸ್ಥಾನದ ಅನ್ನದಾನಕ್ಕೆ ಹೊರೆ ಕಾಣಿಕೆ ರೂಪದಲ್ಲಿ ಹೂ, ಹಿಂಗಾರ, ಅಕ್ಕಿ, ಬೆಲ್ಲ, ತುಪ್ಪ, ಹಾಲು, ತೆಂಗಿನಕಾಯಿ ಸೇರಿದಂತೆ ಇತರ ಸಾಮಾಗ್ರಿಗಳನ್ನು ಏಪ್ರಿಲ್ 20ರ ಒಳಗೆ ತಂದೊಪ್ಪಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಯ ವಿನಂತಿಸಿದೆ.













