
ಕರಾವಳಿ ನಕ್ಸಲ್ ದಳದಲ್ಲಿ ಸಕ್ರಿಯಳಾಗಿದ್ದ ತೊಂಬಟ್ಟು ಲಕ್ಷ್ಮಿ ಪ್ರಸ್ತುತ ಶರಣಾಗಿದ್ದು ಪ್ರಕ್ರಿಯೆ ಬಳಿಕ ಕುಂದಾಪುರ ಡಿ ವೈ ಎಸ್ ಪಿ ಎಚ್ ಡಿ ಕುಲಕರ್ಣಿ ನೇತೃತ್ವದ ಪೊಲೀಸ್ ತಂಡವು ಲಕ್ಷ್ಮಿ ಅವರಿಗೆ ಜಿಲ್ಲಾ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಲಾಯಿತು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ರಾಜ್ಯ ಸರ್ಕಾರದ ಆದೇಶದಂತೆ ಶರಣಾಗತಿ ಪ್ಯಾಕೇಜ್ ನೀಡಲಾಗುತ್ತಿದ್ದು ಈಕೆ ಕರ್ನಾಟಕ ರಾಜ್ಯದವಳಾಗಿದ್ದರಿಂದ ಕೆಟಗರಿ ಎ ಶಿಫಾರಸು ಮಾಡಿದ್ದೇವೆ. ಪುನರ್ವಸತಿ, ಕೌಶಲ ತರಬೇತಿ ಹಾಗೂ ಶಿಕ್ಷಣ ನಡೆಸಲು ಅವಕಾಶವಿದೆ ಎಂದು ಹೇಳಿದ್ದಾರೆ.
ಶರಣಾಗತಿ ಆದ ಬಳಿಕ ಮಾತನಾಡಿದ ಲಕ್ಷ್ಮಿ ಸರ್ಕಾರ್ ಶರಣಾಗತಿ ಪ್ಯಾಕೇಜ್ ಮತ್ತು ಪುನರ್ವಸತಿ ನೀಡುವುದಾಗಿ ಭರವಸೆ ನೀಡಿದ್ದು ನನ್ನ ಊರು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಊರಿಗೆ ಶಾಲೆ, ನೀರು, ಆಸ್ಪತ್ರೆ ವ್ಯವಸ್ಥೆ ಮಾಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.





















