
ಉಡುಪಿ, ಎ.20: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರ ಸಂದೀಪ್ ಪೂಜಾರಿ(37) ಎ.20ರಂದು ಬೆಳಗ್ಗೆ ನಿಧನರಾದರು.
ಇವರು ಸಕಲೇಶಪುರ ಸಮೀಪದ ಬಾಳ್ಳುಪೇಟೆ ಎಂಬಲ್ಲಿ ಮಾ.29ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಪಘಾತದಿಂದ ಬೆನ್ನು ಹುರಿ(ಸ್ಪೈನಲ್ ಕಾಡ್)ಗೆ ತೀವ್ರ ಪೆಟ್ಟಾಗಿ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕಾಪು ತಾಲೂಕಿನ ಶಿರ್ವ ನಿವಾಸಿಯಾಗಿರುವ ಇವರು, ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಬ್ಲಿಕ್ ಟಿವಿ, ಸ್ಪಂದನಾ ಸುದ್ದಿ ವಾಹಿನಿಯಲ್ಲಿ ಕ್ಯಾಮೆರಮೆನ್, ಬಿ ಟಿವಿಯ ಕ್ಯಾಮೆರಮೆನ್ ಹಾಗೂ ವರದಿಗಾರರಾಗಿ ಇವರು ಸೇವೆ ಸಲ್ಲಿಸಿದ್ದು ಪ್ರಸ್ತುತ ಈಟಿವಿ ಭಾರತ್ ವಾಹಿನಿಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಲೈವ್ ವಾಹಿನಿಗಳಾದ ಸಿ4ಯು, ಪ್ರೈಮ್ ಕಾರ್ಲದಲ್ಲಿ ತಂತ್ರಜ್ಞರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು.
ಇವರು ತಂದೆ ತಾಯಿ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ






























































































































