
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಲೇಶಪುರ ತಾಲೂಕಿನ ದೊಡ್ಡತಪ್ಪಲಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಜನರ ಆಶೀರ್ವಾದದಿಂದ ಬಂದಿರುವ ನಮ್ಮ ಸರ್ಕಾರವನ್ನು ಹೇಗಾದರೂ ಮಾಡಿ ಕೆಡವಬೇಕು ಎನ್ನುವ ಕುತಂತ್ರದಿಂದ ಬಿಜೆಪಿಯವರು ನಮ್ಮ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಪಾದಯಾತ್ರೆ ಆರಂಭಿಸುತ್ತಿದ್ದಂತೆಯೇ ನಾವೂ ಸಮಾವೇಶಗಳನ್ನು ಆರಂಭಿಸಿದ್ದೇವೆ. ಕಡೆಯ ದಿನ ಅಂದರೆ, ಆ.9ರಂದು ಮೈಸೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಬಿಜೆಪಿಯ ಎಲ್ಲಾ ಹಗರಣಗಳನ್ನು ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ದೇಶದಲ್ಲಿ ‘ಭ್ರಷ್ಟಾಚಾರದ ಪಿತಾಮಹ ಅಂತಾ ಯಾರಾದರೂ ಇದ್ದರೆ ಅವರು ಬಿಜೆಪಿಯವರು. ಬಿಜೆಪಿಯವರದ್ದು 40% ಭ್ರಷ್ಟಾಚಾರ ಎಂದು ಕೆಂಪಣ್ಣ ಅವರೇ ಈ ಹಿಂದೆ ಆರೋಪ ಮಾಡಿದ್ದರು. ಈಗ ಮುಡಾ ಹಗರಣದ ನೈತಿಕ ಹೊಣೆಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎನ್ನುವ ಅಗತ್ಯವೇನಿಲ್ಲ?, ಈ ಬಗ್ಗೆ ಪಾದಯಾತ್ರೆ ಮಾಡುವ ಅವಶ್ಯ ಕತೆಯೂ ಇಲ್ಲ. ಏಕೆಂದರೆ, ನಮ್ಮ ನೈತಿಕತೆ ಪ್ರಶ್ನಿಸುವಷ್ಟು ನೈತಿಕತೆಯನ್ನು ಅವರೇ ಉಳಿಸಿಕೊಂಡಿಲ್ಲ. ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಅವರಿಗೂ ನಮ್ಮ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.













