
ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಿಜೆಪಿ ತೊರೆದು ಆರಂಭಿಸಿರುವ ‘We The Leaders’ ರಾಜಕೀಯ ಚಳವಳಿಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಚಳವಳಿ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಅಣ್ಣಾಮಲೈ, ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಚಳವಳಿ ಭಾಗವಹಿಸಲಿದೆ ಎಂದು ಘೋಷಿಸಿದರು. ಜೊತೆಗೆ ಸಾರ್ವಜನಿಕ ಜೀವನ ಮತ್ತು ರಾಜಕೀಯಕ್ಕೆ ಆಸಕ್ತಿ ಹೊಂದಿದವರಿಗೆ ತರಬೇತಿ ನೀಡಲು ಎಪಿಜೆ ಅಬ್ದುಲ್ ಕಲಾಂ ನೈತಿಕ ಮತ್ತು ರಾಜಕೀಯ ಕೇಂದ್ರವನ್ನು ಸ್ಥಾಪಿಸಿರುವುದಾಗಿ ಹೇಳಿದರು.
ತಮಿಳು ಗುರುತು ಮತ್ತು ರಾಷ್ಟ್ರೀಯ ದೃಷ್ಟಿಕೋನವನ್ನು ಒಟ್ಟುಗೂಡಿಸುವ ಉದ್ದೇಶದಿಂದ ಈ ಚಳವಳಿ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು. ತಮಿಳು ಮತ್ತು ಭಾರತೀಯ ಗುರುತುಗಳು ಪರಸ್ಪರ ವಿರೋಧಿಗಳಲ್ಲ, ಎರಡೂ ಜೊತೆಯಾಗಿ ಸಾಗಬಹುದು ಎಂದು ಅಭಿಪ್ರಾಯಪಟ್ಟರು.
ವ್ಯಕ್ತಿಪೂಜೆ ಹಾಗೂ ವಂಶಪಾರಂಪರ್ಯ ರಾಜಕೀಯವನ್ನು ಟೀಕಿಸಿದ ಅಣ್ಣಾಮಲೈ, ನಾಯಕತ್ವ ಹುದ್ದೆಗಳಿಗೆ ಅವಧಿ ಮಿತಿ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ರಾಜಕೀಯದ ಭಾಷೆ ಮತ್ತು ಕಾರ್ಯಶೈಲಿಯಲ್ಲಿ ಬದಲಾವಣೆ ತರಬೇಕೆಂಬುದು ತಮ್ಮ ಚಳವಳಿಯ ಮುಖ್ಯ ಗುರಿ ಎಂದು ಹೇಳಿದರು.
































