
ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಯಾವುದೇ ಹಬ್ಬಗಳ ಸಾರ್ವಜನಿಕ ಆಚರಣೆ, ಉತ್ಸವ ಮೆರವಣಿಗೆಗಳಿಗೆ ಪೊಲೀಸ್ ಇಲಾಖೆ ಅಡ್ಡಿಪಡಿಸಿಲ್ಲ. ಸಮಯದ ಮಿತಿಯನ್ನು ನಿಗದಿಪಡಿಸಿಲ್ಲ, ಆದರೆ ಇತರರಿಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಶಬ್ದದ ಮಿತಿ ನಿಗದಿಪಡಿಸಲಾಗಿದ್ದು ಅದನ್ನು ಪಾಲಿಸಿಕೊಂಡು ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿಸಿದ್ದಾರೆ.
ಸಾಕಷ್ಟು ಗಣೇಶೋತ್ಸವ ಮೆರವಣಿಗೆಗಳು ತಡರಾತ್ರಿಯವರೆಗೆ ನಡೆದಿದ್ದು ಎಲ್ಲಿಯೂ ಪೊಲೀಸರು ಸಮಸ್ಯೆ ಕೊಟ್ಟಿಲ್ಲ. ಆದರೆ ಮೈಕ್ ಗಳ ಸೌಂಡ್ ಗೆ ಮಾತ್ರ ಮಿತಿಯನ್ನು ಹಾಕಲಾಗಿತ್ತು. ನೆಹರು ಮೈದಾನದಲ್ಲಿ ಮಂಗಳೂರು ಗಣೇಶೋತ್ಸವ ಕಾರ್ಯಕ್ರಮ ಹಾಗೂ ಅದರ ಮೆರವಣಿಗೆ ಅಚ್ಚುಕಟ್ಟಾಗಿ ಆಯೋಜನೆಗೊಂಡಿತ್ತು. ಟ್ಯಾಬ್ಲೋಗಳಲ್ಲಿ ನಾವು ಸೂಚಿಸಿದಷ್ಟೇ ಸೌಂಡ್ ಬಳಕೆ ಮಾಡಿದ್ದಾರೆ. ಮುಂಜಾನೆ 2:30ರವರೆಗೆ ಮೆರವಣಿಗೆ ನಡೆದಿದ್ದು ಯಾರಿಗೂ ಸಮಸ್ಯೆಯಾಗಿಲ್ಲ.
ನಾಟಕ, ಯಕ್ಷಗಾನಗಳಿಗೂ ಇದೇ ಮಾರ್ಗಸೂಚಿಯಿದ್ದು ಎಲ್ಲಿ ಎಷ್ಟು ಬೇಕಾದರೂ ಸೌಂಡ್ ಇಡುವ ಅವಕಾಶ ಇಲ್ಲ. ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮಗಳ ವ್ಯಾಪ್ತಿ, ಎಷ್ಟು ಜನ ಸೇರುತ್ತಾರೆ ಎನ್ನುವುದನ್ನು ಆಧರಿಸಿ ಅದನ್ನು ಅನುಗುಣವಾಗಿ ಮೈಕ್ ಬಳಕೆ ಮಾಡಬೇಕು. ನೂರು ಜನ ಸೇರುವಲ್ಲಿ 2,000 ಜನರಿಗೆ ಕೇಳಿಸುವಷ್ಟು ಧ್ವನಿ ವರ್ಧಕ ಅಳವಡಿಸಿ ಇತರರಿಗೆ ತೊಂದರೆ ಮಾಡಲು ಯಾವುದೇ ರೀತಿಯಲ್ಲಿ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸ್ಥಳೀಯ ಠಾಣೆಗಳಲ್ಲಿ ಅನುಮತಿ ಪಡೆಯುವಾಗಲೇ ಠಾಣಾ ನಿರೀಕ್ಷಕರು ಈ ಬಗ್ಗೆ ಪರಿಶೀಲಿಸಿ ಎಷ್ಟು ಡೆಸಿಮಲ್ ಬಳಕೆ ಮಾಡಬಹುದು ಎಂದು ಸೂಚಿಸುತ್ತಾರೆ ಎಂದು ವಿವರಿಸಿದರು.













