
ರಾಜ್ಯ ಮಟ್ಟದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ರಾಜಕೀಯದಲ್ಲಿ ಹಲವು ಅಂಶಗಳ ಬಗ್ಗೆ ಭವಿಷ್ಯವನ್ನು ನುಡಿದಿದ್ದು ಗ್ರಹಸ್ಥಿತಿಗಳ ಪ್ರಕಾರ ಡಿಸೆಂಬರ್ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ತ್ಯಜಿಸುವುದಕ್ಕೆ ವಿಪರೀತ ಒತ್ತಡ ಸೃಷ್ಟಿಯಾಗಲಿದೆ. ಆದರೆ ಅವರು ತಮ್ಮ ಹುದ್ದೆಯನ್ನು ತ್ಯಜಿಸಬೇಕಾಗುವಂಥ ಒತ್ತಡವು ದೌರ್ಬಲ್ಯ ಎಂದುಕೊಳ್ಳುವುದು ಅಗತ್ಯವಿಲ್ಲ. ಏಕೆಂದರೆ, ತಮಗೆ ನಿಷ್ಠವಾದವರೊಬ್ಬರು ಅಥವಾ ಅನುಯಾಯಿಯೊಬ್ಬರನ್ನು ಗದ್ದುಗೆ ಮೇಲೆ ಅಥವಾ ಆಯಕಟ್ಟಿನ ಸ್ಥಾನದಲ್ಲಿ ಕೂರಿಸಿಯೇ ನಿರ್ಗಮಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ವಿಪರೀತ ಒತ್ತಡದಿಂದ ಸಿದ್ದರಾಮಯ್ಯ ಅವರು ಹುದ್ದೆಯನ್ನು ಬಿಟ್ಟ ನಂತರ ಯಾರೇ ಅಧಿಕಾರಕ್ಕೆ ಬಂದರೂ ತಮ್ಮದೇ ಪಕ್ಷ ಚುನಾವಣೆ ಸಮಯದಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಾಗದೇ ಚುನಾವಣೆ ಎದುರಿಸುವುದನ್ನು ಅಲ್ಲಗಳೆಯಲಾಗದು. ಜನ್ಮ ಜಾತಕದ ವಿಶ್ಲೇಷಣೆ ಪ್ರಕಾರವಾಗಿ ಸಿದ್ದರಾಮಯ್ಯರವರಿಗಿರುವ ಸಾಮರ್ಥ್ಯವೇನೆಂದರೆ, ತನಗೆ ಬೇಕಾದ ವ್ಯಕ್ತಿಗಳನ್ನು ಉನ್ನತ ಹುದ್ದೆಗೆ ಹಾಗೂ ಆಯಕಟ್ಟಿನ ಜಾಗದಲ್ಲಿ ಕೂರಿಸುವುದಕ್ಕೆ ನಿರ್ಧರಿಸಿದಲ್ಲಿ ಅದನ್ನು ಮಾಡಿಯೇ ತೀರುತ್ತಾರೆ ಹಾಗೂ ರಾಜಕೀಯವಾಗಿ ವ್ಯಕ್ತಿಗಳನ್ನು ಬೆಳೆಸುತ್ತಾರೆ. ಅದಕ್ಕೆ ಬೇಕಾದ ಚಾಣಾಕ್ಷತನ, ಬುದ್ಧಿವಂತಿಕೆ ಹಾಗೂ ಸಿದ್ದರಾಮಯ್ಯ ಅವರಲ್ಲಿದೆ ಎಂದು ಹೇಳಿದ್ದಾರೆ.













