
ಬೆಂಗಳೂರು: ವೈದ್ಯಕೀಯ ನಿರ್ದೇಶನಾಲಯ 2022ರಲ್ಲಿ ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವಂತೆ ತಮಗೆ ಸೂಚಿಸಿ ನೀಡಿದ್ದ ತಿದ್ದೋಲೆಯನ್ನು (ಕೊರಿಜೆಂಡಮ್) ಪ್ರಶ್ನಿಸಿ ಬೆಂಗಳೂರಿನ ಡಾ.ಶರಣ್ಯಾ ಮೋಹನ್ ಸೇರಿದಂತೆ ಒಟ್ಟು 447 ವೈದ್ಯರು ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠವು ಸರ್ಕಾರಿ ಕೋಟಾದಡಿ ಸರ್ಕಾರಿ ಕಾಲೇಜು ಅಥವಾ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ಎಂಬಿಬಿಎಸ್ ವಿದ್ಯಾರ್ಥಿಗಳು ಕಡ್ಡಾಯ ಗ್ರಾಮೀಣ ಸೇವೆ ಅಥವಾ ಸೇವೆ ಸಲ್ಲಿಸದಿದ್ದರೆ 15ರಿಂದ 30 ಲಕ್ಷ ರು.ವರೆಗೆ ದಂಡ ಪಾವತಿಸುವುದಾಗಿ ನೀಡುವ ಬಾಂಡ್ಗಳ ಕಠಿಣ ಷರತ್ತುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಿಸಿ ಆದೇಶಿಸಿದೆ.
ಆದರೆ ಇದೇ ವೇಳೆ ಅರ್ಜಿದಾರರಿಗೆ ಸೀಮಿತವಾಗಿ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ತಿದ್ದೋಲೆ ಅಸಿಂಧುಪಡಿಸಿ ನ್ಯಾಯಪೀಠ ಆದೇಶಿಸಿದೆ.ರಾಜ್ಯದ ಗ್ರಾಮೀಣ, ಬುಡಕಟ್ಟು ಅಥವಾ ಇನ್ನಿತರ ಕಷ್ಟಕರವಾಗಿರುವ ಪ್ರದೇಶಗಳಲ್ಲಿ ವಾಸ ಮಾಡುವ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂಬುದು ಕಡ್ಡಾಯ ಗ್ರಾಮೀಣ ಸೇವೆಯ ಆದೇಶದ ಹಿಂದಿನ ಉದ್ದೇಶವಾಗಿದ್ದು ಮೇಲ್ನೋಟಕ್ಕೆ ಗಮನಿಸಿದಾಗ ಇಂತಹ ಪ್ರದೇಶಗಳನ್ನು ವಾಸ ಇರುವವರಿಗೆ ಅಗತ್ಯ ಹಾಗೂ ತುರ್ತು ಇದ್ದಾಗ ತಕ್ಷಣವೇ ವೈದ್ಯರನ್ನು ತಲುಪಲು ಸರಳ ಮಾರ್ಗಗಳಿಲ್ಲ. ಹೀಗಾಗಿ, ಸರ್ಕಾರಿ ಕೋಟಾದಡಿ ವೈದ್ಯಕೀಯ ಪದವಿ ಪೂರೈಸಿದವರು ಸರ್ಕಾರದ ಸದಾಶಯದ ಭಾಗವಾಗಬೇಕು. ಗ್ರಾಮೀಣ ವೈದ್ಯಕೀಯ ಸೇವೆ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಸರ್ಕಾರಿ ಕೋಟಾದಡಿ ವೈದ್ಯಕೀಯ ಪದವಿಗೆ ಪ್ರವೇಶ ಪಡೆದ ಅಭ್ಯರ್ಥಿಗಳು ಗ್ರಾಮೀಣ ಭಾಗದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಒಂದು ವರ್ಷ ಕಡ್ಡಾಯ ಸೇವೆ ಮಾಡಬೇಕು. ಇಲ್ಲದಿದ್ದಲ್ಲಿ 15ರಿಂದ 30 ಲಕ್ಷ ರು. ದಂಡವನ್ನು ಪಾವತಿಸುವುದಾಗಿ ಬಾಂಡ್ ಪಡೆಯಬೇಕು ಎಂದು 2012ರ ಜು.17ರಂದು ತಿದ್ದುಪಡಿ ನಿಯಮವನ್ನು ರೂಪಿಸಲಾಗಿತ್ತು. ಆದರೆ, ಈ ಸಂಬಂಧ 2022ರ ಜು.22ರಂದು ಅಂದರೆ 10 ವರ್ಷಗಳ ನಂತರ ಸರ್ಕಾರವು ಗೆಜೆಟ್ ನೋಟಿಫಿಕೆಷನ್ ಹೊರಡಿಸಿದೆ. ಹತ್ತು ವರ್ಷಗಳ ಕಾಲ ಗಾಢ ನಿದ್ರೆಯಲ್ಲಿದ್ದ ಸರ್ಕಾರ ನಂತರ ಎಚ್ಚೆತ್ತು ನೋಟಿಫಿಕೇಷನ್ ಹೊರಡಿಸಿದೆ. ಅರ್ಜಿದಾರರು 2015ರಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟಿಗೆ ಪ್ರವೇಶ ಪಡೆದು ಪದವಿ ಪೂರ್ಣಗೊಳಿಸಿದ್ದಾರೆ. ಹಾಗಾಗಿ ಅವರಿಗೆ 2022ರ ನೋಟಿಫಿಕೆಷನ್ ಆಧರಿಸಿ ಅರ್ಜಿದಾರರಿಗೆ ನೀಡಿರುವ ತಿದ್ದೋಲೆಯನ್ನು ಒಪ್ಪಲಾಗದು ಎಂದು ಪೀಠ ಹೇಳಿದೆ.