
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇಲ್ಲಿನ ಲಲಿತಕಲಾ ಸಂಘದ ಆಶ್ರಯದಲ್ಲಿ ಅಂತರಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ “ಎಕ್ಸ್ಟ್ರಾವೇಗಾಂಝ” ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಭುವನೇಂದ್ರ ಕಾಲೇಜು ಮತ್ತು ನನ್ನ ನಡುವೆ ಒಳ್ಳೆಯ ಬಾಂಧವ್ಯದ ನಂಟಿದೆ. ಕಳೆದ 60 ವರ್ಷಗಳಲ್ಲಿ ವಿದ್ಯೆ, ಉದ್ಯೋಗ ಎಲ್ಲವನ್ನೂ ಈ ಕಾಲೇಜು ಕೊಟ್ಟಿದೆ. ಯಾರು ಜೀವನದಲ್ಲಿ ಸೋಲುತ್ತಾರೋ ಅವರು ಯಶಸ್ಸನ್ನು ಗಳಿಸುತ್ತಾರೆ. ಎಕ್ಸ್ಟ್ರಾವೇಗಾಂಝ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಕಾರಿಯಾಗುತ್ತವೆ.
ವಿದ್ಯಾರ್ಥಿಗಳ ಜೀವ ಮತ್ತು ಜೀವನಕ್ಕೆ ಬಹಳ ಮಹತ್ವವಿದೆ. ಅವಕಾಶಗಳು ಕೆಲವೇ ಸಂದರ್ಭಗಳಲ್ಲಿ ಮಾತ್ರ ಸಿಗುತ್ತವೆ. ಅದನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಕೆ.ಎಂ.ಇ.ಎಸ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಶ್ರೀ ರಾಮಚಂದ್ರ ನೆಲ್ಲಿಕಾರು ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ಮತ್ತೋರ್ವ ಅತಿಥಿ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಲಕ್ಷ್ಮೀನಾರಾಯಣ ಕಾಮತ್ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಕಲಿಕೆಯ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಇನ್ನೂ ಹೆಚ್ಚು ಸದೃಢಗೊಳ್ಳಲು ಸಾಧ್ಯ. ಹಾಗಾಗಿ ನಾವು ಶರೀರ ಮತ್ತು ಮನಸ್ಸನ್ನು ಯಾವಾಗಲೂ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ ಕೋಟ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಎರ್ಮಾಳ್ ಮೋಹನ್ ಶೆಣೈ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಮೇಶ್ ಎಸ್.ಸಿ., ಐಕ್ಯೂಎಸಿ ನಿರ್ದೇಶಕರಾದ ಪ್ರೊ. ಎಚ್. ಜಿ. ನಾಗಭೂಷಣ್, ಕಾರ್ಯಕ್ರಮದ ಸಂಯೋಜಕರಾದ ಪ್ರೊ. ನಂದಕಿಶೋರ್ ಕೆ ಹಾಗೂ ಸ್ಪರ್ಧೆಗಳ ತೀರ್ಪುಗಾರರಾದ ಮಾಸೂಮ್ ರಾಜ್, ಹರೀಶ್ ಮಲಾರ್, ಸುಶ್ಮಿತಾ ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಸ್ವಾಗತಿಸಿ, ವಿಯೋಲಾ ರೊಸಾರಿಯೋ ಕಾರ್ಯಕ್ರಮ ನಿರೂಪಿಸಿ ಅದಿತಿ ಕಾರಂತ್ ವಂದಿಸಿದರು.



















