
ಬೆಂಗಳೂರು: ಶವರ್ಮಾ ಆಹಾರ ಪದಾರ್ಥ ಸೇವಿಸಿ ಫುಡ್ ಪಾಯಿಸನ್ ಆಗಿರುವ ವರದಿಗಳ ಹಿನ್ನೆಲೆ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಕಡೆ 17 ಶವರ್ಮಾ ಮಾದರಿ ಸಂಗ್ರಹಿಸಿ ಪರೀಕ್ಷಿಸಿದ್ದು ಈ ಪೈಕಿ ಸಂಗ್ರಹಿಸಿರುವ ಹಲವು ಶವರ್ಮಾ ಮಾದರಿಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ಈಸ್ಟ್ಗಳು ಪತ್ತೆಯಾಗಿದ್ದು ಹೀಗಾಗಿ ಸುರಕ್ಷಿತ ನಿಯಮಗಳನ್ನು ಪಾಲಿಸದ ಶವರ್ಮಾ ತಯಾರಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಎಚ್ಚರಿಸಿದ್ದಾರೆ.
9 ಮಾದರಿಗಳು ಸುರಕ್ಷಿತವಾಗಿದ್ದು, 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ಗಳು ಕಂಡು ಬಂದಿವೆ. ಆಹಾರ ತಯಾರಿಕೆ ಸಂದರ್ಭದಲ್ಲಿನ ನೈರ್ಮಲ್ಯದ ಕೊರತೆ, ದೀರ್ಘಕಾಲದಿಂದ ಸಂಗ್ರಹಿಸಿರುವುದು ಮತ್ತು ವಿತರಣೆಯ ಸಂದರ್ಭದಲ್ಲಿನ ನೈರ್ಮಲ್ಯ ಕೊರತೆಯಿಂದ ಬ್ಯಾಕ್ಟೀರಿಯಾ ಹಾಗೂ ಈಸ್ಟ್ಗಳು ಕಂಡು ಬರುತ್ತವೆ. ಹೀಗಾಗಿ ಎಲ್ಲಾ ಶವರ್ಮಾ ಆಹಾರ ತಯಾರಕರು ಆಹಾರ ಸುರಕ್ಷತಾ ನಿಯಮ ಪಾಲಿಸಬೇಕು. ಪ್ರತಿ ದಿನ ಹೊಸದಾಗಿ ತಯಾರಿಸಿ ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಬೇಕು. ಎಫ್ಎಸ್ಎಸ್ಎಐ ನೋಂದಣಿ, ಪರವಾನಗಿ ಕಡ್ಡಾಯವಾಗಿ ಪಡೆದು ವ್ಯಾಪಾರ ಸ್ಥಳದಲ್ಲಿ ಪ್ರದರ್ಶಿಸಬೇಕು. ಸಾರ್ವಜನಿಕರು ಸಹ ಎಫ್ಎಸ್ಎಸ್ಐ ನೋಂದಾಯಿತ ಮಾರಾಟಗಾರರಿಂದಲೇ ಶವರ್ಮಾ ಖರೀದಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದಲ್ಲದೆ ಗೋಬಿ, ಕಬಾಬ್, ಪಾನಿಪುರಿ, ಶವರ್ಮಾದಲ್ಲಿ ಕೃತಕ ಕಲರ್ ಬೆರಕೆ ಬೆನ್ನಲ್ಲೆ ಹೊರರಾಜ್ಯದ ಬೀದಿಬದಿ ವ್ಯಾಪಾರಿಗಳ ಇನ್ನು ಮುಂದೆ ಕರ್ನಾಟಕದಲ್ಲಿ ವ್ಯಾಪಾರ ಮಾಡುವಂತಿಲ್ಲ ಎಂಬ ನಿರ್ಧಾರವನ್ನು ಕೈಗೊಂಡಿದೆ. ಹೀಗಾಗಿ ಜುಲೈ 1ರಿಂದ ಹೊರರಾಜ್ಯದ ಬೀದಿಬದಿ ವ್ಯಾಪಾರಿಗಳ ಸರ್ವೆ ನಡೆಯಲಿದ್ದು ಆ ಬಳಿಕ ವ್ಯಾಪಾರಿಗಳಿಗೆ ಆಧಾರ್, ರೇಷನ್, ಮತದಾರರ ಚೀಟಿ ಕಡ್ಡಾಯವಾಗಿರಲಿದೆ. ಗುರುತಿನ ಚೀಟಿ ಹಾಕಿಕೊಂಡು ವ್ಯಾಪಾರ ಮಾಡಲು ಸೂಚಿಸಲಾಗಿದ್ದು ಬಿಬಿಎಂಪಿ ಅಧಿಕಾರಿಗಳ ಸರ್ವೆ ಬಳಿಕ ಹೊಸ ನಿಯಮ ಜಾರಿಯಾಗಲಿದೆ.