
ಬೆಂಗಳೂರು: ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೈಸೂರು ದಸರಾ ಜಂಬೂ ಸವಾರಿ ಆನೆಗಳ ಜತೆಗೆ ಸಾರ್ವಜನಿಕರು ರೀಲ್ ಮಾಡುವುದು, ಫೋಟೋ ತೆಗೆಸುವುದಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು ಆನೆಗಳನ್ನು ಸುರಕ್ಷಿತವಾಗಿ ಶಿಬಿರಕ್ಕೆ ಬಿಡುವವರೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಮೈಸೂರು ದಸರಾ ಜಂಬೂ ಸವಾರಿಗೆ ಕಾಡಿನಿಂದ ಬಂದಿರುವ ಆನೆಗಳೊಂದಿಗೆ ಸಾರ್ವಜನಿಕರು ರೀಲ್ಸ್ ಮಾಡಲು, ಫೋಟೋ ತೆಗೆಸಿಕೊಳ್ಳಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಅದರಿಂದ ಆನೆಗಳು ವಿಚಲಿತವಾಗಿದ್ದು, ಅನುಚಿತವಾಗಿ ವರ್ತಿಸುತ್ತಿವೆ. ಆನೆಗಳನ್ನು ವೀಕ್ಷಿಸಲು ಬರುವವರಲ್ಲಿ ಕೆಲವರು ರೀಲ್ಸ್ ಮಾಡುವುದರ ಜತೆಗೆ ಆನೆಗಳ ಸೊಂಡಿಲನ್ನು ತಬ್ಬಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶಿಬಿರದಿಂದ ಬಂದಿರುವ ಆನೆಗಳು ಸುರಕ್ಷಿತವಾಗಿ ಶಿಬಿರಕ್ಕೆ ವಾಪಾಸಾಗುವವರೆಗೂ ಯಾವುದೇ ಅನಾಹುತವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಇನ್ನು ಮುಂದೆ ಆನೆಗಳೊಂದಿಗೆ ರೀಲ್ಸ್ ಮಾಡಲು, ಅನುಚಿತವಾಗಿ ಭಾವಚಿತ್ರ ತೆಗೆಸಿಕೊಳ್ಳಲು ಅವಕಾಶ ನೀಡಬಾರದು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.













