ಭಾಗ – 607
ಭರತೇಶ ಶೆಟ್ಟಿ, ಎಕ್ಕಾರು

ಸಂಜೆಯ ಹೊಂಬಣ್ಣದ ಸೂರ್ಯರಶ್ಮಿಗಳು ಮೈ ಮೇಲೆ ಬೀಳುತ್ತಿವೆ. ಸತ್ವಯುಕ್ತ ಕಿರಣಗಳಿಗೆ ಮೈಯೊಡ್ಡುತ್ತಾ, ಮುಸ್ಸಂಜೆಯ ಮಂದ ಮಾರುತನ ಬೀಸುಗೆಯಿಂದ ಮೈ ತಣಿಸುತ್ತಾ ಆರಾಮವಾಗಿ ಸಾಗುತ್ತಿದ್ದಾನೆ. ಅರಸ ಕುಂತಳೇಶ ಪೃಕೃತಿಯ ಸೊಬಗು, ದೇವದತ್ತವಾದ ನೈಸರ್ಗಿಕ ಸಿರಿಯನ್ನು ಮುದದಿಂದ ಆಸ್ವಾದಿಸುತ್ತಾ ಇಂತಹ ಅನರ್ಘ್ಯ ಸವಲತ್ತನ್ನು ದೇವರು ಕರುಣಿಸಿದ್ದಾರೆ. ಈ ಕೊಡುಗೆ – ಯಾವುದೇ ತೆರಿಗೆ, ಕಾಣಿಕೆಗಳನ್ನು ಪಾವತಿಸದೆ ಉಚಿತವಾಗಿ ಅನುಭವಿಸುವ ಜೀವಸಂಕುಲಕ್ಕೆ ದೇವ ಋಣವಾಗಿ ಪರಿಣಮಿಸಿದೆ. ಈ ಋಣ ಸಂದಾಯಕ್ಕಾಗಿ ಪ್ರಾಕೃತ ಸಿರಿಯನ್ನು ಅಷ್ಟೇ ಜಾಗ್ರತೆಯಿಂದ ಬಳಸಿ ಪೋಷಿಸಿ ಸಂರಕ್ಷಿಸಿ ಉಳಿಸಬೇಕೆಂದು ರಾಜನಾಗಿ ತನ್ನ ಕರ್ತವ್ಯದ ಬಗ್ಗೆಯೂ ಯೋಚಿಸುತ್ತಾ ವಿಹಾರ ನಿರತನಾಗಿದ್ದಾನೆ. ಪಶ್ಚಿಮಾಭಿಮುಖವಾಗಿ ಸಾಗುತ್ತಿದ ರಾಜ ಕುಂತಳೇಶ ಪಡುವಣ ದಿಕ್ಕಿನ ಗಗನದಲ್ಲಿ ಬಂಗಾರದ ಬಟ್ಟಲಿನಂತೆ ಹೊಳೆಯುತ್ತಿದ್ದ ಸೂರ್ಯನನ್ನು ನೋಡುತ್ತಾ ಯೋಚಿಸತೊಡಗಿದ್ದಾನೆ. ದೇವರು ನಮ್ಮ ಬದುಕಿಗಾಗಿ ಹಗಲು ಸೂರ್ಯ, ರಾತ್ರಿ ಚಂದ್ರ. ಒಬ್ಬರಿಂದ ಪ್ರಖರ ಶಾಖಯುಕ್ತ ಬೆಳಕು, ಮತ್ತೊಬ್ಬರಿಂದ ಶೀತಲ ಬೆಳದಿಂಗಳು. ಎಂತಹ ಶಿಸ್ತು- ಸೂರ್ಯ ಚಂದ್ರರ ಸಮಯ, ಕಾರ್ಯದಲ್ಲಿ ಎಳ್ಳಿನಿತೂ ವ್ಯತ್ಯಯವಾಗದೆ ನಿರಂತರವಾಗಿ ಸಾಗುತ್ತದೆ. ಅದೂ ಯಾವ ಫಲಾಪೇಕ್ಷೆಯೂ ಇಲ್ಲದ ನಿಸ್ವಾರ್ಥ ಕೊಡುಗೆ. ಮನುಷ್ಯ ಅರಿತು ಆಲೋಚಿಸಿದರೆ ತನ್ನ ಬದುಕಿನ ಬೇಕು ಬೇಡಗಳನ್ನಉ ಸಂಪಾದನೆಯ ಕ್ರಯ ವಿಕ್ರಯದಿಂದ ಪಡೆದುಕೊಳ್ಳುತ್ತಾನೆ. ಇದೆಲ್ಲಕ್ಕಿಂತಲೂ ಅಮೂಲ್ಯವಾದ ಬೆಳಕು, ಗಾಳಿ, ನೀರು, ಮರ ಗಿಡಗಳು, ಮಣ್ಣು ಹೀಗೆ ಎಲ್ಲವನ್ನೂ ದೇವರು ಧರ್ಮಾರ್ಥವಾಗಿ ನೀಡಿದ್ದಾನೆ. ಒಂದು ವೇಳೆ ಇವುಗಳನ್ನೂ ತನ್ನ ದುಡಿಮೆಯ ಸಂಪಾದನೆಯಿಂದಲೇ ಮನುಷ್ಯ ಖರೀದಿಸಿ ಬದುಕುವಂತಾಗಿದ್ದರೆ ಜೀವನ ಎನ್ನುವುದನ್ನು ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಹೀಗೆಲ್ಲಾ ಕುಂತಳೇಶ ಆಡಳಿತಾತ್ಮಕವಾಗಿ ಪ್ರಜೆಗಳ ಸಾಮಾಜಿಕ ಜೀವನದಲ್ಲಿ ದೇವರ ಸೃಷ್ಟಿಯಿಂದಾಗಿರುವ ಮೂಲಭೂತ ವ್ಯವಸ್ಥೆಗಳನ್ನು ಗಹನವಾಗಿ ಯೋಚಿಸುತ್ತಾ ಸಾಗುತ್ತಿದ್ದಾನೆ. ಏನೋ ಕಾರಣದಿಂದ ಆಕಸ್ಮಿಕವಾಗಿ ಹಿಂದಿರುಗಿ ನೊಡುವಂತಾಯಿತು. ಬೆಳಕು ಮುಂಭಾಗದಿಂದ ಬಿದ್ದರೆ ನೆರಳು ಹಿಂಭಾಗದಲ್ಲಿ ಕಾಣಿಸುವುದು ಸಹಜ ಪ್ರಕ್ರಿಯೆ. ಅಂತೆಯೇ ರಾಜನ ನೆರಳೂ ರಾಜನ ಹಿಂಭಾಗದಲ್ಲೇ ಗೋಚರಿಸುತ್ತಿದೆ. ಆದರೆ ವಿಸ್ಮಯವೆಂದರೆ ತಾನು ಏರಿರುವ ಕುದುರೆಯ ನೆರಳು ಪೂರ್ಣವಿದೆ. ಬಾಲದಿಂದ ತಲೆಯವರೆಗೂ ಸ್ಪಷ್ಟವಾಗಿದೆ. ಆದರೆ ನನ್ನ ದೇಹದ ನೆರಳು ಮಾತ್ರ ರುಂಡವಿಲ್ಲದ ಕೇವಲ ಮುಂಡವಾಗಿ ಕಾಣಿಸುತ್ತಿದೆ. ದೇಹ, ಕೈ ಕಾಲುಗಳ ನೆರಳು ಇದೆ. ಇದನ್ನು ನೋಡಿ ರಾಜ ಒಮ್ಮೆಗೆ ಆಶ್ಚರ್ಯಚಕಿತನಾದ. “ಅರೇ! ಇದೇನು ಆಶ್ಚರ್ಯ? ನನ್ನ ಕೊರಳ ಮೇಲೆ ತಲೆಯಿದೆ. ಆದರೆ ನನ್ನ ನೆರಳಿಗೆ ಕೊರಳ ಮೇಲೆ ಶಿರವಿಲ್ಲ. ಇದು ಹೇಗೆ ಸಾಧ್ಯ. ನನ್ನ ಕೆನ್ನೆಯ ಮೇಲೆ ಸೂರ್ಯನ ಕಿರಣಗಳು ಬೀಳುತ್ತಿವೆ, ಆದರೂ ನೆರಳು ಯಾಕೆ ಬೀಳುತ್ತಿಲ್ಲ. ರುಂಡವಿಲ್ಲದ ಮುಂಡ ಮಾತ್ರ ಗೋಚರಿಸುವ ನೆರಳನ್ನು ಕಂಡ ರಾಜ ಕುಂತಳೇಶನಿಗೆ ಶರೀರವೆಲ್ಲ ನಡುಗಿ ಭಯ ಆವರಿಸಿತು. ನನ್ನ ರುಂಡ ಛೇದಿಸಲ್ಪಟ್ಟ ಛಾಯೆ ಹೇಗೆ ಮೂಡಿದೆ?” ಅರಸನಿಗೆ ಆತಂಕ ಇಮ್ಮಡಿಯಾಗಿ, ವಿಹಾರ ಮುಂದುವರಿಸದೆ ಹಿಂತಿರುಗಿ ಅರಮನೆಗೆ ಬಂದು ಸೇರಿದನು. ತಕ್ಷಣ ರಾಜ ಪುರೋಹಿತರು, ಮಹಾನ್ ಪಂಡಿತರೂ, ಪ್ರಾಜ್ಞರೂ ಆಗಿರುವ ಗಾವಲ ರನ್ನು ಅರಮನೆಗೆ ಕರೆಸಿಕೊಂಡನು.
ತಾನು ಕಂಡ ವಿಚಿತ್ರವನ್ನು ರಾಜ ಕುಂತಳೇಶನು ಭಯಭೀತನಾಗಿಯೇ ರಾಜಪುರೋಹಿತರಾದ ಗಾವಲರಿಗೆ ಸವಿವರವಾಗಿ ವಿವರಿಸಿ ಹೇಳಿ, “ಗುರುಗಳೇ, ಯಾಕೆ ಹೀಗಾಯಿತು? ಈ ವಿಸ್ಮಯದ ಸಂಬಂಧವಾಗಿ ನನಗೊಂದೂ ಅರ್ಥವಾಗುತ್ತಿಲ್ಲ. ನನ್ನ ಮನದ ಗೊಂದಲ ಪರಿಹರಿಸುವಿರಾ?” ಎಂದು ಕೇಳಿಕೊಂಡನು.
ಗಾವಲರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅರಸನಿಗೆ ವಿವರಿಸಿ ಹೇಳತೊಡಗಿದರು. “ರಾಜಾ! ನಾವು ಬದುಕುತ್ತಿರುವುದು ಈ ಮರ್ತ್ಯಲೋಕದಲ್ಲಿ. ಪ್ರಕೃತಿಯ ಮಡಿಲಿನಲ್ಲಿ. ನಿತ್ಯ ಜೀವನದ ಪ್ರಯಾಣ, ಪ್ರವಾಸ, ನಿರ್ಣಯಗಳು ಇತ್ಯಾದಿ ವಿಚಾರಗಳಲ್ಲಿ ನಾವಾಗಿ ಪ್ರಾಕೃತ ಸಿರಿಯನ್ನು ನಮಗೆ ಬೇಕಾದಂತೆ ಸ್ವೇಚ್ಚೆಯಿಂದ ಬಳಸುತ್ತೇವೆಯೇ ಹೊರತು ನಮ್ಮ ಒಡನಾಡಿಗಳಾಗಿಸಿ ಸಂವಹನ ಮಾಡಲಾಗದು. ಆದರೆ ಪೃಕೃತಿ ಹಾಗಲ್ಲ, ನಮ್ಮ ಜೊತೆಗಿದ್ದು ಅದರದ್ದೆ ಆದ ಭಾಷೆ, ವಿಧಾನಗಳಿಂದ ನಮಗೆ ಸೂಚನೆ ನೀಡಬಲ್ಲುದು. ನಾವು ಹೊರಟಿರುವ ಕಾರ್ಯ ಸಾಧನೆಯ ಕುರಿತಾಗಿ ತಿಳಿಸಬಲ್ಲುದು. ಇದನ್ನೇ ನಿಮಿತ್ತಗಳು ಅಥವಾ ಶಕುನಗಳು ಎಂದು ಬಲ್ಲವರು ಹೇಳಿದ್ದಾರೆ. ಇಂತಹ ಅತಿಮಾನುಷ ಸೂಚನೆಗಳು ಶುಭಪ್ರದವಾಗಿದ್ದರೆ ಶುಭಶಕುನ, ಅಶುಭ ಸೂಚಕವಾಗಿದ್ದರೆ ಅಶುಭ ಶಕುನ ಎಂದು ಪರಿಗಣಿತವಾಗಿದೆ. ಈ ವಿಚಾರದಲ್ಲಿ ಗಹನ ಅಧ್ಯಯನ ನಡೆಸಿದ ದೇವರಾಜ ಇಂದ್ರ, ಶುಕ್ರಾಚಾರ್ಯರು, ಬ್ರಹಸ್ಪತಿ, ಕಪಿಸ್ಥಲ, ಗರುಡ, ಭಗುರಿ, ದೇವಲ, ವೃಷಭಾಚಾರ್ಯ, ಭಾರಧ್ವಜ, ಆವಂತಿ ರಾಜವರ್ಧನ, ಸಪ್ತ ಋಷಿ ಮಂಡಲ ಇವರೆಲ್ಲ ಬಹಳ ವಿಸ್ತೃತವಾದ ತಮ್ಮ ಅಭಿಪ್ರಾಯ ಮಂಡಿಸಿ ಶಕುನ ಶಾಸ್ತ್ರವನ್ನೇ ಸಿದ್ಧಪಡಿಸಿ ಲೋಕೋಪಯೋಗಕ್ಕಾಗಿ ಒದಗಿಸಿದ್ದಾರೆ. ಈ ಶಾಸ್ತ್ರಾನುಸಾರ ಶಕುನಗಳನ್ನು ವಿಮರ್ಶೆ ಮಾಡುವಲ್ಲಿ ಶಬ್ದ, ಚಲನೆ, ದಿಕ್ಕು, ದೃಷ್ಟಿ, ಘಟನೆ ಹಾಗು ಸಂಭವಿಸಿದ ಕಾಲ ಮಾನ ಬಹಳ ಮಹತ್ತರವಾದ ಅಂಶಗಳಾಗುತ್ತವೆ. ಈ ಅಂಶಗಳನ್ನು ಪರಿಗಣಿಸಿ ಶಕುನಗಳನ್ನು ನಕ್ಷತ್ರ ದೀಪ್ತ, ಮುಹೂರ್ತ ದೀಪ್ತ, ತಿಥಿ ದೀಪ್ತ, ವಾಯುದೀಪ್ತ, ಸೂರ್ಯ ದೀಪ್ತ, ಗತಿ ದೀಪ್ತ, ಸ್ಥಾನ ದೀಪ್ತ, ಭಾವ ದೀಪ್ತ, ಸ್ವರ ದೀಪ್ತ, ಚೇಷ್ಠಾ ದೀಪ್ತಗಳೆಂದು ಪ್ರಧಾನ ವಿಧಗಳಾಗಿ ವಿಂಗಡಿಸಿದ್ದಾರೆ. ಅನರ್ಘ್ಯವೂ, ಅಮೂಲ್ಯವೂ ಆದ ಈ ಶಕುನ ಶಾಸ್ತ್ರವು ಪ್ರಶ್ನಾ ಶಾಸ್ತ್ರದ ಭಾಗವೂ ಆಗಿದೆ. ಇಂದು ನಿಮಗೆ ಆಗಿರುವ ಛಾಯೆಯ ಅನುಭವ ಸೂರ್ಯ ದೀಪ್ತವಾಗಿದೆ. ದೃಷ್ಟಿಗೆ ಗೋಚರಿಸಿ ದೃಷ್ಟಿ ದೀಪ್ತವೂ ಆಗಿದೆ. ಸಮಗ್ರವಾಗಿ ಶಾಸ್ತ್ರಬದ್ಧವಾಗಿ ಅವಲೋಕನ ಮಾಡಿದರೆ ಈ ಶಕುನ ಅಶುಭ ಸೂಚಕವಾಗಿದೆ. ಈ ನಿಮಿತ್ತದ ಸೂಚನೆಯನ್ನು ಅರಿಯುವ ಪ್ರಯತ್ನ ಮಾಡುವಾಗ ಇದು ಮರಣ ಸೂಚಕವಾಗಿದೆ. ಅಂದರೆ ತುಸು ಕಾಲಾಂತರದಲ್ಲಿ ನಿಮ್ಮ ಮರಣ ಸಂಭವಿಸಲಿದೆ ಎಂದು ಶಕುನ ಶಾಸ್ತ್ರಾಧಾರವಾಗಿ ಹೇಳಬಲ್ಲೆ” ಎಂದು ಬಹಳ ವ್ಯಥೆಗೊಳಗಾಗಿ ಗಾವಲರು ಚಿಂತನೆ ಮಾಡಿ ತಿಳಿಸಿದರು.
ರಾಜ ಪುರೋಹಿತ ಗಾವಲರೊಡನೆ ಆಳವಾದ ವಿಚಾರ ಮಂಥನ ಮತ್ತು ಸಮಾಲೋಚನೆ ನಡೆಸಿ ಚಂದ್ರಹಾಸನನ್ನು ಈ ಕೂಡಲೇ ಅರಮನೆಗೆ ಬರಬೇಕು ಎಂದು ರಾಜಾಜ್ಞೆ ಹೊರಡಿಸಿ ಕರೆಸಿ ಕೊಂಡಿದ್ದಾರೆ. ಚಂದ್ರಹಾಸನೂ ಬಂದು ಮಹಾರಾಜ ಕುಂತಳೇಶ ಹಾಗು ಪೂಜ್ಯರಾದ ಗುರು ಗಾವಲರಿಗೆ ವಂದಿಸಿ ನಿಂತಿದ್ದಾನೆ. ತನ್ನನ್ನು ತಕ್ಷಣ ಕರೆಸಿಕೊಂಡ ಕಾರಣ ತಿಳಿಯದೆ, ಮಹಾರಾಜರ ಅಪ್ಪಣೆಗಾಗಿ ನಿಂತಿದ್ದಾನೆ. ಮಹಾರಾಜ ಕುಂತಳೇಶ ಚಂದ್ರಹಾಸನನ್ನು ನೋಡುತ್ತಾ “
ಮುಂದುವರಿಯುವುದು…

























































