ಭಾಗ – 589
ಭರತೇಶ ಶೆಟ್ಟಿ,ಎಕ್ಕಾರು

“ಹಿಂದೆ ಮೇಧಾವಿ ಎಂಬ ಧರ್ಮಾತ್ಮ ರಾಜನಿದ್ದನು. ಕೇರಳ ಪ್ರದೇಶವನ್ನು ಆಳ್ವಿಕೆ ನಡೆಸುತ್ತಿದ್ದ ಈತ ಜನಾನುರಾಗಿಯಾಗಿದ್ದನು. ಇಂತಹ ರಾಜನ ಪಟ್ಟದರಸಿಯಲ್ಲಿ ಸುಪುತ್ರನೋರ್ವ ಜನಿಸಿದ. ಮುದ್ದಾದ ಮಗು, ಸಲ್ಲಕ್ಷಣವಾಗಿ ಶೋಭಿಸುತ್ತಿದ್ದ ಮಗುವಿಗೆ ಒಂದು ಶಾರೀರಿಕ ವೈಶಿಷ್ಟ್ಯವಿತ್ತು. ಏನೆಂದರೆ ಎಡಕಾಲಿನಲ್ಲಿ ಆರು ಬೆರಳುಗಳಿದ್ದವು. ನಂತರ ಜಾತ ಕರ್ಮಾದಿಗಳನ್ನು ವಿಮರ್ಶಿಸಿದಾಗ ಮಗು ಅರಿಷ್ಟಯೋಗದಿಂದ ಕೂಡಿದೆ, ಮೂಲ ನಕ್ಷತ್ರದಲ್ಲಿ ಜನಿಸಿದೆ. ಅಜ್ಜ ಅಜ್ಜಿ ಮತ್ತು ಹೆತ್ತವರಿಗೆ ಆಪತ್ತು ಎದುರಾಗಲಿದೆ ಎಂಬಿತ್ಯಾದಿ ಘಾತಕ ಸತ್ಯ ತಿಳಿದು ಬಂತು.
ವಿಚಾರ ಹೀಗಿರುವಾಗಲೇ ತುರ್ತು ಯುದ್ಧ ಸಂಭವಿಸಿ, ಯುದ್ಧದಲ್ಲಿ ಮಹಾರಾಜ ಮೇಧಾವಿ ವಿಕ್ರಮ ಮೆರೆದು ಹೋರಾಡಿದರೂ, ಸೋತು ಸಾವನ್ನಪ್ಪಿದನು. ಪತಿ ಮಡಿದ ವಾರ್ತೆ ಕೇಳಿದ ಮಹಾರಾಣಿ, ಬಾಣಂತಿ ಎಳೆ ಮಗುವಿನ ತಾಯಿಯಾದರೂ ತನ್ನ ಶಿಶುವಿಗೆ ಇನ್ಯಾರು ಗತಿ ಎಂದೂ ವಿವೇಚಿಸದೆ ಸತಿ ಧರ್ಮವನ್ನು ಪಾಲಿಸಿ ಸಹಗಮನ ಮಾಡಿದಳು. ಅತ್ತ ತಂದೆ ವೀರಸ್ವರ್ಗವನ್ನೈದಿದರೆ, ತಾಯಿ ಸಹಗಮನ ಮೂಲಕ ದೇಹತ್ಯಾಗ ಮಾಡಿ ಈಗ ಮಗು ಅನಾಥವಾಗಿದೆ. ಆ ರಾಜ್ಯದ ಮಂತ್ರಿ ಮಹಾ ದುರ್ಬುದ್ಧಿಯುಳ್ಳವನು. ತಾನು ಈ ರಾಜ್ಯದ ಅರಸನಾಗಬೇಕು ಎಂದು ಸಿದ್ಧನಾದಾಗ ರಾಜನಿಗೆ ಗಂಡು ಮಗು ಇದೆಯಲ್ಲ? ಮುಂದೆ ಆ ಮಗುವಿಗೆ ಅಧಿಕಾರ ಕೊಡಬೇಕಾದೀತು. ಈ ಮಗು ಉಳಿದರೆ ಮಗ್ಗುಲಿನ ಮುಳ್ಳಾದೀತು. ಹಾಗಾಗಿ ಚಿಗುರಲ್ಲೇ ಚಿವುಟಬೇಕು. ಮರವಾಗಿ ಬೆಳೆಯಲು ಬಿಟ್ಟರೆ ಕಷ್ಟವಾದೀತು ಎಂಬಿತ್ಯಾದಿ ಗುಪ್ತ ಸಮಾಲೋಚನೆಗಳು ನಡೆಯತೊಡಗಿತು. ಮಗುವನ್ನು ಸಾಯಿಸಲು ಸಿದ್ಧವಾಗುತ್ತಿರುವ ವಿಚಾರ ಅರಮನೆಯೊಳಗೆ ಕೆಲಸ ಮಾಡುತ್ತಿದ್ದ, ಮಹಾರಾಣಿಯ ಪರಮಾಪ್ತ ದಾಸಿ ಧಾತ್ರಿ ಎಂಬವಳ ಕಿವಿಗೆ ಬಿತ್ತು. ಎಳೆ ಮಗುವನ್ನು ಅರಮನೆಯಲ್ಲೇ ಬಿಟ್ಟರೆ ಈ ಮಂತ್ರಿಗಳು ಏನಾದರು ಮಾಡಿ ಕೊಂದು ಬಿಡುವುದು ನಿಶ್ಚಿತ ಎಂಬ ಸತ್ಯ ಆಕೆಗೆ ಅರಿವಾಯಿತು. ನಾನು ಮೊದಲೇ ನಡು ಪ್ರಾಯ ಕಳೆದು ವೃದ್ಧಾಪ್ಯದತ್ತ ವಾಲುತ್ತಿರುವ ಮುದುಕಿ. ಅಸಹಾಯಕಳಾದ ನಾನು ಏನು ಮಾಡಲಿ ದೇವರೇ! ನಿನ್ನೆಯವರೆಗೆ ಮಹಾರಾಜ – ಮಹಾರಾಣಿಯವರಿಗೆ ವಂದಿಸುತ್ತಿದ್ದ ಪರಿಚಾರಕ ವರ್ಗವೆಲ್ಲ ಇಂದು ಈ ಮಂತ್ರಿಗಳಿಗೇ ನಮಸ್ಕಾರ ಹೊಡೆಯುತ್ತಿದ್ದಾರೆ. ಅವಕಾಶವಾದಿಗಳಾದ ಈ ಜನರಲ್ಲಿ ಯಾರನ್ನು ನಂಬಬೇಕೆಂದೇ ತಿಳಿಯಲಾಗದೆ ವ್ಯಥೆಗೊಳಗಾದಳು. ರಾತ್ರಿ ಮಗುವಿಗೆ ದನದ ಹಾಲನ್ನು ಬಿಸಿ ಮಾಡಿ, ತಣಿಸಿ ಜಾಗ್ರತೆಯಿಂದ ಮಗುವಿಗೆ ಹನಿ ಹನಿಯಾಗಿ ತುಟಿಗಿಟ್ಟು ಕುಡಿಸಿ ಮಲಗಿಸಿದಳು. ಪಾಪ ಎಳೆ ಕಂದನಿಗೆ ತನ್ನ ಮಾತಾ ಪಿತರು ಯಾರು? ಅವರು ಸತ್ತಿದ್ದಾರೋ ಬದುಕಿದ್ದಾರೋ! ಒಂದೂ ಗೊತ್ತಾಗದು. ಮಗುವಿನ ಬಳಿಯಿಂದ ಅತ್ತಿತ್ತ ಸಾಗದ ಧಾತ್ರಿ ಮುಂದೇನು ಗತಿ? ಏನಾದೀತು ಈ ಮಗುವಿಗೆ? ಹೇಗಾದರು ಮಾಡಿ ಈ ಮಗುವನ್ನು ಉಳಿಸಬೇಕು. ಮಂತ್ರಿಯವರೇ ಅರಸನಾದರೆ ಅವರನ್ನೆದುರಿಸಿ ಮಗುವಿನ ರಕ್ಷಣೆ ಮಾಡಲು ನಾನು ಸಮರ್ಥಳಲ್ಲ. ಹೀಗಿರುವಾಗ ನಾನೇನು ಮಾಡಲಿ. ಈವರೆಗೆ ನನಗೆ ಉದ್ಯೋಗ ನೀಡಿ, ಅನ್ನ ಆಶ್ರಯವಿತ್ತು ಪ್ರೀತಿಯಿಂದ ಸಲಹಿದ್ದ ರಾಜ ರಾಣಿಯರ ಋಣವನ್ನು ಹೇಗೆ ತೀರಿಸಲಿ? ಈ ಮುದ್ದು ಮಗುವನ್ನು ಹೇಗೆ ಕಾಪಾಡಲಿ ಎಂದು ಯೋಚಿಸುತ್ತಾ ಮಗ್ನಳಾದಳು.
ರಾತ್ರಿ ದುಷ್ಟ ಬುದ್ಧಿಯುಳ್ಳ ಮಂತ್ರಿ ತನ್ನೊಡೆಯ ಸತ್ತಿದ್ದರೂ, ಯಾವುದೇ ದುಃಖ ಹೊಂದದೆ ಪರಮಾಪ್ತರ ಜೊತೆ ತಾನು ಮುಂದೆ ಕೇರಳದ ರಾಜನಾಗುವ ಕನಸು ಕಾಣುತ್ತಾ, ಔತನದೂಟ ಸವಿದು ಮದಿರೆಯ ನಶೆಯಲ್ಲಿ ಮಲಗಿ ಬಿಟ್ಟಿದ್ದಾನೆ.
ಇತ್ತ ಧಾತ್ರಿಗೆ ಮಧ್ಯ ರಾತ್ರಿ ಕಳೆದು ಜಾವದ ಹೊತ್ತಾದರೂ ನಿದ್ದೆ ಕಣ್ಣಿಗಾವರಿಸುತ್ತಿಲ್ಲ. ಈ ಮುದ್ದು ಮಗು ಅನಾಥವಾಗಬಾರದು. ರಾಜಕುಮಾರ ಬದುಕುಳಿಯಲೇ ಬೇಕು. ದೇವರ ಮೇಲೆ ಭಾರ ಹಾಕಿ, ಮಗುವನ್ನು ಎತ್ತಿ ಎದೆಗವಚಿಕೊಂಡು ಅಪರಾತ್ರಿಯಲ್ಲೇ ಹೊರಬಂದು ಯಾರಿಗೂ ಗೊತ್ತಾಗದಂತೆ ರಾಜಬೀದಿ ದಾಟಿ ಹೊರ ನಡೆದಳು. ಓಡುತ್ತಾ ನಗರದ ಹೊರ ಭಾಗದ ಹಳ್ಳಿಯನ್ನು ಉಪಕ್ರಮಿಸಿ, ಕಾಡು ದಾರಿ ಹಿಡಿದು ಮಗುವಿನ ಪ್ರಾಣ ರಕ್ಷಣೆಗಾಗಿ ಪಣ ತೊಟ್ಟು ತನಗೆ ಕೂಡುವಷ್ಟು ವೇಗದ ಹೆಜ್ಜೆಗಳನ್ನಿಡುತ್ತಾ ಹೋಗ ತೊಡಗಿದ್ದಾಳೆ.


















































