
ಜನಪರ ಆಡಳಿತವನ್ನು ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾರದೆ ಸರ್ಕಾರದ ವಿರುದ್ಧ ಕಾರ್ಕಳ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಜನಸೇರಿಸಲು ಸುಳ್ಳು ಪ್ರಚಾರ ಮಾಡುತ್ತಿರುವುದನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ತಿಳಿಸಿದ್ದಾರೆ.
ಗೃಹಲಕ್ಷ್ಮಿ, ಗ್ರಹ ಜ್ಯೋತಿ, ಅನ್ನ ಭಾಗ್ಯ, ಯುವನಿಧಿ, ಶಕ್ತಿ ಯೋಜನೆ, ಹೆಸರಿನ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡಿ ಬಡವರ , ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಕಾರ್ಕಳ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಅದ್ಯಕ್ಷ ಶುಭದರಾವ್ ತಿಳಿಸಿದ್ದಾರೆ.
ಕಾರ್ಕಳದಲ್ಲಿ ವ್ಯಾಪಕ ಜನವಿರೋಧವನ್ನು ಎದುರಿಸುತ್ತಿರುವ ಕಾರ್ಕಳ ಬಿಜೆಪಿಯು ಜನರಿಗೆ ಸುಳ್ಳು ಮಾಹಿತಿಯನ್ನು ನೀಡಿ ಪ್ರತಿಭಟನೆಯ ಹೆಸರಿನಲ್ಲಿ ದಾರಿ ತಪ್ಪಿಸುವ ಯತ್ನವನ್ನು ನಡೆಸುತ್ತಿರುವುದು ಖಂಡನೀಯ ಎಂದರು.
ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿ ಜನರಿಗೆ ಅನಾವಶ್ಯಕವಾಗಿ ಭಯ ಹುಟ್ಟಿಸುತ್ತಿದೆ. ಧರ್ಮ ರಕ್ಷಣೆ, ಧರ್ಮಕ್ಕೆ ಅಪಾಯ ಎನ್ನುವ ಬಿಜೆಪಿಯ ಸಾಂಪ್ರದಾಯಿಕ ಸುಳ್ಳುಗಳನ್ನು ಜನರು ಈಗ ನಂಬುವ ಸ್ಥಿತಿಯಲ್ಲಿ ಇಲ್ಲ, ಇದರಿಂದ ಕಂಗೆಟ್ಟಿರುವ ಕಾರ್ಕಳ ಬಿಜೆಪಿ ಬೆಲೆ ಏರಿಕೆ, ಮುಂತಾದ ವಿಚಾರಗಳನ್ನು ಹೇಳಿ ಜನರಿಗೆ ಮಂಕು ಬೂದಿ ಎರಚುವ ಪ್ರಯತ್ನದಲ್ಲಿದೆ. ಕೇಂದ್ರ ಸರ್ಕಾರವು ಅವೈಜ್ಞಾನಿಕವಾಗಿ ಜಿಎಸ್ಟಿ, ಪೆಟ್ರೋಲ್ ಬೆಲೆ ಏರಿಕೆ, ಆಹಾರ ವಸ್ತುಗಳ ಬೆಲೆ ಏರಿಕೆ, ಹಾಲಿನ ಮೇಲೆ ತೆರಿಗೆ ಹಾಕಿದಾಗ ಪ್ರತಿಭಟಿಸದೆ ಅದನ್ನು ಸಮರ್ಥಿಸಿದ್ದ ಬಿಜೆಪಿಗೆ ಈಗ ಬೆಲೆ ಏರಿಕೆಯ ನೆನಪಾಗಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಪ್ರತಿಭಟನೆಗೆ ಕರೆ ನೀಡಿದರೂ ಜನರಿಂದ ಯಾವುದೇ ಸ್ಪಂದನೆ ದೊರಕದಿರುವುದರಿಂದ ಕಂಗೆಟ್ಟಿರುವ ಬಿಜೆಪಿ ವಾಮ ಮಾರ್ಗದಿಂದ ಜನ ಸೇರಿಸುವ ನೀಚ ಕೃತ್ಯಕ್ಕೆ ಕೈ ಹಾಕಿದೆ. ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ಮೂಲಕ ಗ್ರಾಮ ಪಂಚಾಯತ್ ಹೆಸರಿನಲ್ಲಿ ಜನರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುತ್ತಿದೆ, ರೇಷನ್ ಕಾರ್ಡ್ ಉಳಿಯಬೇಕಿದ್ದರೆ ಪ್ರತಿಭಟನೆಗೆ ಬನ್ನಿ, 9\11 ಮಾಡಿಸಬೇಕಿದ್ದರೆ 6 ತಾರೀಖಿಗೆ ಕಾರ್ಕಳಕ್ಕೆ ಬನ್ನಿ ಎಂದು ಸುಳ್ಳು ಹೇಳಿ ಜನ ಸೇರಿಸಲು ಪ್ರಯತ್ನಿಸುತ್ತಿರುವುದು ನಾಚಿಕೆ ಕೇಡಾಗಿದೆ ಎಂದಿದ್ದಾರೆ. ಬಿಜೆಪಿಯ ಇಂತಹ ಕೀಳುಮಟ್ದದ ರಾಜಕೀಯ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಯಾರೂ ಕಿವಿಗೊಡಬಾರದು ಎಂದು
ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.





















