
ಬೆಂಗಳೂರು: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಹಂತ ಹಂತವಾಗಿ ಒಂದೊಂದರ ಬೆಲೆ ಏರಿಕೆ ಆರಂಭವಾಗಿದ್ದು ಇತ್ತೀಚಿಗಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿತ್ತು. ಇದೀಗ ರಾಜ್ಯ ಸರ್ಕಾರ ಇದರ ಬೆನ್ನಲ್ಲೇ ದಿನಬಳಕೆಯ ಮತ್ತೊಂದು ಮುಖ್ಯ ವಸ್ತುವಾದ ಹಾಲಿನ ದರದಲ್ಲೂ ಕರ್ನಾಟಕ ಹಾಲು ಮಹಾಮಂಡಳ 2 ರೂಪಾಯಿ ಏರಿಕೆ ಮಾಡಿ ಪ್ರಕಟಣೆ ಹೊರಡಿಸಿದ್ದು, ನಾಳೆಯಿಂದಲೇ ಈ ದರ ಜಾರಿಯಾಗಲಿದೆ.
ಹಾಲಿನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮಿಗಳು ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿಯೇ ಕಾಫಿ, ಟೀ, ತಿಂಡಿ ಬೆಲೆಯ ಏರಿಕೆಯ ಮೇಲೂ ಇದು ಪರಿಣಾಮ ಬೀರಲಿದೆ ಎಂದು ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಬೆಂಗಳೂರು ಹೋಟೆಲ್ ಮಾಲಿಕರ ಸಂಘಟನೆ ಅಧ್ಯಕ್ಷ ಪಿಸಿರಾವ್ ನಂದಿನಿ ಹಾಲನ್ನು ಅತೀ ಹೆಚ್ಚು ಬಳಕೆ ಮಾಡೋದು ಹೋಟೆಲ್ ಉದ್ಯಮಿಗಳು. ಈಗಾಗಲೇ ಸಾಕಷ್ಟು ಬೆಲೆ ಏರಿಕೆಯಿಂದ ಹೋಟೆಲ್ ನಡೆಸೋದೇ ಕಷ್ಟವಾಗಿದೆ. ಇದೀಗ ಹಾಲಿನ ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ನುಂಗಲಾರದ ತುತ್ತಾಗಿದ್ದು ನಾವು ಹೋಟೆಲ್ ಗಳಲ್ಲಿ ಕಾಫಿ,ಟೀ ತಿಂಡಿ ಬೆಲೆ ಏರಿಕೆ ಬಗ್ಗೆ ಸಭೆ ಕರೆದು ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.