
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನೊಳಗಿನ ಭಿನ್ನಮತ ತೀವ್ರವಾಗಿರುವ ನಡುವೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಹಾಗೂ ತಮ್ಮ ವಿರೋಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿಮ್ಮ ಅಂತ್ಯ ನೋಡುವವರೆಗೂ ನಾನು ಸಾಯಲ್ಲ” ಎಂದು ಅವರು ಸವಾಲು ಹಾಕಿದ್ದಾರೆ.
ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಮಮತಾ, ಬಿಜೆಪಿ ತಮ್ಮ ವಿರುದ್ಧ ರಾಜಕೀಯ ಸಂಚು ರೂಪಿಸಿದೆ ಎಂದು ಆರೋಪಿಸಿದರು. “ಅವರಿಗೆ ನನಗೆ ಹೃದಯಾಘಾತವಾಗಲಿ ಎಂಬ ಆಸೆ ಇತ್ತು. ಆದರೆ ನಾನು ಬದುಕಿದ್ದು ನಿಮ್ಮ ಸೋಲು ನೋಡುತ್ತೇನೆ” ಎಂದು ಹೇಳಿದರು.
ಪಕ್ಷ ತೊರೆದ ನಾಯಕರನ್ನು “ದ್ರೋಹಿಗಳು” ಎಂದು ಕರೆದ ಮಮತಾ, ಅವರ ಪರವಾಗಿ ರಾಜ್ಯದ ಜನರ ಬಳಿ ಕ್ಷಮೆ ಯಾಚಿಸಿದರು. ತಮ್ಮ ಕುಟುಂಬ ರಾಜಕೀಯ ಲಾಭಕ್ಕಾಗಿ ಎಂದಿಗೂ ಆತ್ಮಸಾಕ್ಷಿಯನ್ನು ಮಾರಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಪೊಲೀಸರನ್ನು ಬಳಸಿಕೊಂಡು ಬಿಜೆಪಿ ಟಿಎಂಸಿಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಭಯ ಮತ್ತು ಬೆದರಿಕೆಯ ಮೂಲಕ ಜನಪ್ರತಿನಿಧಿಗಳನ್ನು ಪಕ್ಷಾಂತರಗೊಳಿಸಲಾಗುತ್ತಿದೆ ಎಂದರು. ತನಿಖೆ ಎದುರಿಸುತ್ತಿರುವ ಕೆಲ ನಾಯಕರು ರಾಜಕೀಯ ರಕ್ಷಣೆಗಾಗಿ ಬಿಜೆಪಿಗೆ ಸೇರುತ್ತಿದ್ದಾರೆ ಎಂದು ಟೀಕಿಸಿದರು.
ಪಕ್ಷದೊಳಗಿನ ಬಂಡಾಯಕ್ಕೆ ಅಭಿಷೇಕ್ ಬ್ಯಾನರ್ಜಿ ಕಾರಣ ಎಂಬ ಆರೋಪವನ್ನು ತಳ್ಳಿ ಹಾಕಿದ ಮಮತಾ, ಅವರಿಗೆ ಬಹಿರಂಗ ಬೆಂಬಲ ಘೋಷಿಸಿದರು. ಹಲವು ಕಷ್ಟಗಳ ನಡುವೆಯೂ ಅಭಿಷೇಕ್ ಹೋರಾಟ ಮುಂದುವರಿಸಿದ್ದಾರೆ ಎಂದು ಶ್ಲಾಘಿಸಿದರು.
ಬಂಡಾಯ ಬಣ ಸೇರಿದ ಶಾಸಕ ಮದನ್ ಮಿತ್ರ ಕುರಿತು ಮಾತನಾಡಿದ ಅವರು, ಅವರ ಕುಟುಂಬಕ್ಕೆ ಇಡಿ ಸಮನ್ಸ್ ಬಂದಿದ್ದ ಕಾರಣದಿಂದಲೇ ಅವರು ಪಕ್ಷ ಬದಲಾಯಿಸಿದ್ದಾರೆ ಎಂದು ಹೇಳಿದರು. ಈ ನಿರ್ಧಾರಕ್ಕೂ ಅಭಿಷೇಕ್ಗೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದಿಂದ ಕೆಲ ನಾಯಕರು ಹೊರಹೋದರೂ ಟಿಎಂಸಿಯ ಹೋರಾಟ ನಿಲ್ಲುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಮತಾ, ಅಗತ್ಯವಿದ್ದರೆ ಮತ್ತೆ ಪಕ್ಷವನ್ನು ಕಟ್ಟುವ ಶಕ್ತಿ ತಮಗಿದೆ ಎಂದು ಹೇಳಿದರು. ಜೊತೆಗೆ ಸೋನಂ ವಾಂಗ್ಚುಕ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಮ್ಮ ಬೆಂಬಲವನ್ನು ಸೂಚಿಸಿರುವುದಾಗಿ ತಿಳಿಸಿದರು.















































