
ನವದೆಹಲಿ: ದೆಹಲಿಯಲ್ಲಿ ಉಷ್ಣ ಮಾರುತದ ಬೇಗೆಗೆ ಕಳೆದ 24 ಗಂಟೆಗಳಲ್ಲಿ 22 ಜನರು ಉಷ್ಣ ಸಂಬಂಧಿ ವ್ಯಾಧಿಗಳಿಂದ ಸಾವನ್ನಪ್ಪಿದ್ದು ಹೀಗಾಗಿ 2 ದಿನದಲ್ಲಿ 42 ಜನರು ದಿಲ್ಲಿಯಲ್ಲಿ ತಾಪಕ್ಕೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನವ ದೆಹಲಿಯ ಪ್ರಮುಖ 3 ಆಸ್ಪತ್ರೆಗಳಾದ ಸಫರ್ಜಂಗ್ ಆಸ್ಪತ್ರೆಯಲ್ಲಿ 33 ಜನರು ಉಷ್ಣ ಸಂಬಂಧಿತ ಅನಾರೋಗ್ಯದಿಂದ ದಾಖಲಾಗಿದ್ದು, ಇವರಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ 22 ಜನರಲ್ಲಿ 4 ಜನರು ಮೃತಪಟ್ಟಿದ್ದಾರೆ. ದೆಹಲಿ ಸರ್ಕಾರದ ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ 5 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.