
ಚಂಡೀಗಢ: ಸುಳ್ಳಿಗೆ ಆಯಸ್ಸಿಲ್ಲ, ಸತ್ಯಕ್ಕೆ ಸಾವಿಲ್ಲ ಎಂಬ ಮಾತಿನಂತೆ ಘಟನೆ ನಡೆದು ಮೂರು ವರ್ಷಗಳ ನಂತರ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು ಗುಂಡೇಟಿಗೆ ಬಲಿಯಾದ ಉದ್ಯಮಿಯ ಸಾವಿನ ಹಿಂದೆ ಇದ್ದಿದ್ದು ನಾಟಕವಾಡಿದ ಪತ್ನಿಯೇ ಎಂಬುದು ಬೆಳಕಿಗೆ ಬಂದಿದೆ.ಮೂರು ವರ್ಷಗಳ ಹಿಂದೆ 2021ರ ಡಿಸೆಂಬರ್ 15, ಹರಿಯಾಣದ ಪಾಣಿಪತ್ನಲ್ಲಿ ಉದ್ಯಮಿ ವಿನೋದ್ ಭರಾರಾ ಗುಂಡೇಟಿಗೆ ಬಲಿಯಾಗಿದ್ದು ಅವರ ಮನೆಯಲ್ಲೇ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದ ಪೊಲೀಸರಿಗೆ ಶೂಟರ್ ದೇವ್ ಸುನರ್ ಶರಣಾಗಿದ್ದು ಹೀಗಾಗಿ ಪೊಲೀಸರು ಕೂಡ ಪ್ರಕರಣದ ಬಗ್ಗೆ ಬೇರೆ ಆಯಾಮದಿಂದ ಯೋಚಿಸಲು ಹೋಗಿರಲಿಲ್ಲ, ವಿನೋದ್ ಅವರನ್ನು ಶೂಟ್ ಮಾಡಿದ್ದ ದೇವ್ ಸುನರ್, ತಾನು ಅಪಘಾತ ಮಾಡಿದ್ದ ಪ್ರಕರಣದಲ್ಲಿ ವಿನೋದ್ ಗಂಭೀರವಾಗಿ ಗಾಯಗೊಂಡಿದ್ದರು.
ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಅವರು ನಿರಾಕರಿಸಿದ್ದರಿಂದ ಅವರನ್ನು ಗುಂಡಿಕ್ಕಿ ಕೊಂದೇ ಎಂದು ಹೇಳಿಕೆ ನೀಡಿದ್ದ. ಹೀಗಾಗಿ ದೇವ್ ಸುನರ್ಗೆ ಶಿಕ್ಷೆಯಾಗಿ ಫೈಲ್ ಕ್ಲೋಸ್ ಮಾಡಲಾಗಿತ್ತು. ಈ ಮಧ್ಯೆ ಜಿಲ್ಲಾ ಪೊಲೀಸ್ ಮುಖ್ಯಸ್ಥ ಮತ್ತು ಐಪಿಎಸ್ ಅಧಿಕಾರಿ ಅಜಿತ್ ಸಿಂಗ್ ಶೇಖಾವತ್ ಅವರ ಫೋನ್ಗೆ ವಾಟ್ಸಾಪ್ ಸಂದೇಶವೊಂದು ಬಂದಿದ್ದು, ಅದೇನೆಂದರೆ ವಿನೋದ್ಗೆ ನಿಕಟವಾಗಿರುವ ಯಾರೋ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸಿ ಎಂಬ ಮನವಿ ಈ ವಾಟ್ಸಾಪ್ ಸಂದೇಶದಲ್ಲಿತ್ತು. ಆದರೆ ಆಸ್ಟ್ರೇಲಿಯಾದಲ್ಲಿರುವ ವಿನೋದ್ ಅವರ ಸೋದರನೇ ಈ ಸಂದೇಶ ಕಳುಹಿಸಿದ್ದ ಎಂಬ ವಿಚಾರವನ್ನು ಪೊಲೀಸರು ನಂತರ ಪತ್ತೆ ಮಾಡಿದ್ದರು. ಇದಾದ ನಂತರ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದರಲ್ಲೇನೋ ತಪ್ಪಾಗಿದೆ ಎಂಬ ವಿಚಾರ ಪೊಲೀಸ್ ಅಧಿಕಾರಿಯನ್ನು ಕಾಡಿದ್ದು ಸೂಕ್ಷ್ಮವಾಗಿ ತನಿಖೆಗಿಳಿದ ಪೊಲೀಸ್ ಅಧಿಕಾರಿಗಳು ಕೊಲೆಯಾದ ವ್ಯಕ್ತಿಯ ಪತ್ನಿ ಮೇಲೆ ಕಣ್ಣಿಟ್ಟಿದ್ದರು.ತನಿಖೆಯ ನಂತರ ಪೊಲೀಸರಿಗೆ ಉದ್ಯಮಿ ವಿನೋದ್ ಅವರನ್ನು ಹತ್ಯೆ ಮಾಡಿದ ದೇವ್ ಸುನರ್ ಅವರು ವಿನೋದ್ ಅವರ ಪತ್ನಿ ನಿಧಿಯ ಜೊತೆ ಬಹಳ ಆತ್ಮೀಯವಾಗಿದ್ದ ಜಿಮ್ ತರಬೇತುದಾರ ಸುಮಿತ್ ಎಂಬಾತನಿಗೆ ಬಹಳ ಆತ್ಮೀಯ ಗೆಳೆಯ ಎಂಬುದು ತಿಳಿಯುತ್ತದೆ. ವಿನೋದ್ ಅವರ ಪತ್ನಿ ನಿಧಿ ಜಿಮ್ ತರಬೇತುದಾರ ಸುಮಿತ್ನನ್ನು ಜಿಮ್ನಲ್ಲಿ ಭೇಟಿಯಾಗಿದ್ದು ಈ ಭೇಟಿ ಕ್ರಮೇಣ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಇದು ಪತಿ ವಿನೋದ್ಗೆ ತಿಳಿದು ಮನೆಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಅಲ್ಲದೇ ತನ್ನ ಪತ್ನಿಯಿಂದ ದೂರ ಇರುವಂತೆ ಸುಮಿತ್ಗೆ ವಿನೋದ್ ವಾರ್ನ್ ಮಾಡಿದ್ದರು. ಆದರೆ ಜಗಳ ಮುಂದುವರೆದಂತೆ ಇಬ್ಬರು ಸೇರಿ ವಿನೋದ್ ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಜೊತೆಗೆ ಇದಕ್ಕಾಗಿ ಹರ್ಯಾಣದ ಟ್ರಕ್ ಚಾಲಕ ದೇವ್ ಸುನರ್ಗೆ 10 ಲಕ್ಷ ನೀಡಿದ್ದರು. ಅಲ್ಲದೇ ವಿನೋದ್ ಕಾರಿಗೆ ಅಪಘಾತವನ್ನು ಮಾಡಿಸಿದ್ದರು. ಆದರೆ ಆ ಅವಘಡದಲ್ಲಿ ವಿನೋದ್ ಪಾರಾಗಿದ್ದರು. ಆದರೆ ನಂತರದಲ್ಲಿ 2ನೇ ಬಾರಿ ಹತ್ಯೆಗೆ ಸಂಚು ರೂಪಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.ಈ ಬಗ್ಗೆ ಹಲವು ಮಾಹಿತಿಗಳನ್ನು ಸೇರಿಸಿ ಪೊಲೀಸರು ನಿಧಿ ಹಾಗೂ ಸುಮಿತ್ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ವಿನೋದ್ ಹತ್ಯೆಗೈದ್ ಆರೋಪಿ ದೇವ್ ಸುನರ್ನ ಕಾನೂನು ವೆಚ್ಚ ಹಾಗೂ ಮನೆವೆಚ್ಚವನ್ನು ವಿನೋದ್ ಸಾವಿನ ನಂತರ ಸಿಕ್ಕಾ ವಿಮಾ ಹಣದಿಂದ ಭರಿಸಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಈಗ ಇಬ್ಬರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.