ಅಂತಾರಾಷ್ಟ್ರೀಯ ಜಿಹಾದಿ ಡ್ರಗ್ಸ್ ಜಾಲ ಶಾಮೀಲಾಗಿರುವ ಶಂಕೆ

ಕಾರ್ಕಳ : ಕುಕ್ಕುಂದೂರು ಅಯ್ಯಪ್ಪ ನಗರ ಗರಡಿ ಬಳಿ ಪರಿಶಿಷ್ಟ ಪಂಗಡದ ಯುವತಿಯನ್ನು ಕೆಲ ದುಷ್ಕರ್ಮಿಗಳು ಪುಸಲಾಯಿಸಿ, ಮಾದಕ ವಸ್ತು ಒತ್ತಾಯಪೂರ್ವಕವಾಗಿ ಸೇವಿಸುವಂತೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಕೃತ್ಯದಲ್ಲಿ ಶಾಮೀಲಾಗಿರುವ ಎಲ್ಲ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಆಗ್ರಹಿಸಿದೆ.
ಈ ಘಟನೆಯಿಂದ ಸಮಾಜದಲ್ಲಿ ಮಹಿಳೆಯರಿಗೆ ಭಯದ ವಾತಾವರಣ ಉಂಟಾಗಿದ್ದು, ಈ ಜಿಹಾದಿ ಕೃತ್ಯವನ್ನು ಎಸಗಿದವರು ಕ್ರಿಮಿನಲ್ ಹಿನ್ನೆಲೆಯವರಾಗಿರುವ ಸಂಶಯವಿದೆ. ಇದೊಂದು ಪೂರ್ವಯೋಜಿತ ಕೃತ್ಯ ಎಂದು ಕಂಡುಬರುತ್ತದೆ. ಈ ಪೈಶಾಚಿಕ ಕೃತ್ಯದ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಇದೆ. ಹೀಗಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾದ ತನಿಖೆಗಾಗಿ ಪ್ರಕರಣವನ್ನು ರಾಷ್ಟ್ರೀ ತನಿಖಾ ದಳಕ್ಕೆ (ಎನ್ಐಎ)ಗೆ ಒಪ್ಪಿಸಬೇಕೆಂದು ಒತ್ತಾಯಿಸಿದೆ.
ಕಾರ್ಕಳದಲ್ಲಿ ಕಾಲೇಜು ಕ್ಯಾಂಪಸ್ಗಳ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವ ಬಗ್ಗೆ ಈ ಮೊದಲು ಕೂಡ ಪತ್ರಿಕೆಗಳಲ್ಲಿ ಬಂದಿರುತ್ತದೆ. ಆದರೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳದಿರುವುದು ಖೇದಕರ. ಈ ಬಗ್ಗೆ ಇಲಾಖೆ ಮೊದಲೇ ಎಚ್ಚೆತ್ತುಕೊಳ್ಳುತ್ತಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಯುವತಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದೆ.


































