ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಶಿಕ್ಷಣ ಅತೀ ಅಗತ್ಯ: ಪ್ರಭಾಕರ ಶೆಟ್ಟಿ ಕೊಂಡಳ್ಳಿ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ
ವಾಣಿಜ್ಯ ವಿಭಾಗದ ಆರಂಭೋತ್ಸವ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ
ನಡೆಯಿತು. ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಕನ್ನಡ
ಶಿಕ್ಷಕ ಹಾಗೂ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ
ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಅವರು ದೀಪ ಬೆಳಗುವುದರ ಮೂಲಕ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ
ಆರಂಭೋತ್ಸವಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳು ಹಾಗೂ
ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಅವರು “ಬದಲಾಗುತ್ತಿರುವ
ಜಗತ್ತಿಗೆ ನಾವು ಹೊಂದಿಕೊಳ್ಳಬೇಕಾದರೆ ಶಿಕ್ಷಣ ಅತೀ ಅಗತ್ಯ. ಹೆತ್ತವರು
ಗುಣವಂತರಾದರೆ ಅದನ್ನು ನೋಡಿ ಕಲಿಯುವ ಮಕ್ಕಳು ತಾವೂ
ಗುಣವಂತರಾಗುತ್ತಾರೆ. ಕಲಿಕೆ ಒಂದು ಅದ್ಭುತ ತಪಸ್ಸು ಇದ್ದಂತೆ. ಪರಿಶ್ರಮ
ಪಟ್ಟರೆ ಜಗತ್ತಿನಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಮೂಡಿಬರಬಹುದು” ಎಂದು
ಹೇಳಿದರು. ಇನ್ನೋರ್ವ ಅತಿಥಿ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಮಾಜಿ
ಅಧ್ಯಕ್ಷ ಹಾಗೂ ಉಡುಪಿಯ ಸಿಎಸ್ಐ ಹುಡುಗರ ವಸತಿ ನಿಲಯದ
ವ್ಯವಸ್ಥಾಪಕರಾದ ಜಾನ್ ಸುದರ್ಶನ್ ಅವರು ಮಾತನಾಡಿ “ಕ್ರೈಸ್ಟ್ ಕಿಂಗ್ ಶಿಕ್ಷಣ
ಸಂಸ್ಥೆ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ಕಟ್ಟಿಕೊಡುವುದರಲ್ಲಿ
ಮುಂಚೂಣಿಯಲ್ಲಿದೆ. ಉಡುಪಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಫಲಿತಾಂಶ
ಪಡೆಯುತ್ತಿರುವುದು ಇಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ” ಎಂದು
ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್
ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಭವಿಷ್ಯ
ಅನ್ನುವುದು ನಾವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ನಲ್ಲಿ ಇಲ್ಲ, ಆಯ್ಕೆ
ಮಾಡಿಕೊಂಡ ಕೋರ್ಸ್ ಅನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತೇವೆ
ಎನ್ನುವುದರ ಮೇಲೆ ನಿರ್ಧರಿತವಾಗುತ್ತದೆ. ಕಲಿಯುಗ ಎನ್ನುವುದು
ಜ್ಞಾನದ ಯುಗವಾಗಿದ್ದು ಮಕ್ಕಳು ಜ್ಞಾನಾರ್ಜನೆಗೆ ಪ್ರಥಮ ಪ್ರಾಧಾನ್ಯತೆ
ನೀಡಬೇಕು” ಎಂದು ಹೇಳಿದರು. ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀ ನಾರಾಯಣ
ಕಾಮತ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು.
ಸಂಸ್ಥೆಯ ಸಮಾಲೋಚಕಿ ಡಾ.ಸಿಸ್ಟರ್ ಶಾರ್ಲೆಟ್ ಸಿಕ್ವೇರಾ ಹದಿಹರೆಯದ
ವಯಸ್ಸಿನಲ್ಲಿ ಮಕ್ಕಳಲ್ಲಿ ಕಂಡು ಬರುವ ಸಮಸ್ಯೆಗಳು ಹಾಗೂ ಅದಕ್ಕೆ
ಪೋಷಕರು ಸ್ಪಂದಿಸಬೇಕಾದ ರೀತಿಗಳ ಕುರಿತು ಮಾಹಿತಿ ನೀಡಿದರು. ವಾಣಿಜ್ಯ
ವಿಭಾಗದ ಮುಖ್ಯಸ್ಥರಾದ ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್
ಅವರು ವಾಣಿಜ್ಯ ವಿಭಾಗವನ್ನು ಆಯ್ಕೆಮಾಡಿಕೊಂಡ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ
ಇರುವ ಅವಕಾಶಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ
ನೀಡಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಢಾಲ್ಫ್ ಕಿಶೋರ್ ಲೋಬೊ,
ಶಿಕ್ಷಕ-ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ
ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರಉಪನ್ಯಾಸಕ
ದೀಪಕ್ ಸ್ವಾಗತಿಸಿ ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ
ನಿರೂಪಿಸಿ ವಂದಿಸಿದರು.