
ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ಜುಲೈ 1 2024 ರಂದು ನಾಡಿನ ಹೆಸರಾಂತ ಸಾಹಿತಿಗಳ 15 ಪುಸ್ತಕಗಳನ್ನು ಖ್ಯಾತ ಬರಹಗಾರ ಜೋಗಿ ನಾಮಾಂಕಿತ ಗಿರೀಶ್ ರಾವ್ ಹತ್ವಾರ್ ರವರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಂಡಿರುವ ಪುಸ್ತಕಗಳೆಂದರೆ ನರೇಂದ್ರ ಪೈರವರ ಆಯ್ದ ವಿಮರ್ಶೆಗಳನ್ನು ಒಳಗೊಂಡ ಸಾವಿರದ ಒಂದು ಪುಸ್ತಕ, ಯಶೋದಾ ಮೋಹನ್ ರವರ ಇಳಿ ಹಗಲಿನ ತೇವಗಳು ಎಂಬ ಕಥಾಸಂಕಲನ, ಸುಧಾ ನಾಗೇಶ್ರವರ ಹೊಂಬೆಳಕು ಎಂಬ ಚಿಂತನ ಬರಹಗಳು, ವಾಣಿ ರಾಜ್ ರವರ ಕಥಾಸಂಕಲನ ಸವಿ ನೆನಪುಗಳ ಹಂದರ, ಡಾ. ಸುಬ್ರಹ್ಮಣ್ಯ ಸಿ ಕುಂದೂರು ರವರ ಮಲೆನಾಡಿನ ಕಥನವಾದ ಜೀವನ ಯಾನ, ರಾಜೇಂದ್ರ ಭಟ್ ರವರ ರಾಜ ಪಥ ಎಂಬ ಲೇಖನಗಳ ಪುಸ್ತಕ, ಕೊಂಡಳ್ಳಿ ಪ್ರಭಾಕರ ಶೆಟ್ಟಿ ರವರ ಸಾರ್ಥಕ ಜೀವನಕ್ಕೆ ಕಗ್ಗೋಪದೇಶ ಎಂಬ ಲೇಖನಗಳು, ದಿಗಂತ್ ಬಿಂಬೈಲ್ ರವರ ಕೊಂದು ಪಾಪ ತಿಂದ್ ಪರಿಹಾರ ಎಂಬ ಕಥಾ ಪ್ರಸಂಗಗಳು, ರಾಜಶೇಖರ ಹಳೆ ಮನೆ ರವರ ಕಾದಂಬರಿ ಒಡಲುಗೊಂಡವರು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್ ಎಲ್ ರವರ ಅರಿವಿನ ದಾರಿ ಎಂಬ ಲೇಖನಗಳ ಪುಸ್ತಕ, ಅನುಬೆಳ್ಳೆ ನಾಮಾಂಕಿತ ರಾಘವೇಂದ್ರ ಬಿ ರಾವ್ ರವರ ನಗುವ ನಯನ ಮಧುರ ಮೌನ ಎಂಬ ಕಾದಂಬರಿ, ರಾಮಕೃಷ್ಣ ಹೆಗಡೆ ರವರ ಒಲವಧಾರೆ ಎಂಬ ಕವನ ಸಂಕಲನ, ಲಲಿತಾ ಮುದ್ರಾಡಿ ರವರ ಕವನ ಸಂಕಲನ ಅರ್ಥವಾಗದವರು, ಲಕ್ಷ್ಮಣ್ ಬಜಿಲರ ಕವನ ಸಂಕಲನ ನಿರ್ವಾಣ, ಮಹೇಶ್ ಪುತ್ತೂರು ರವರ ಕಾದಂಬರಿ ವರ್ಣ. ಈ ಸಂದರ್ಭದಲ್ಲಿ ಮಾತನಾಡಿದ ಗಿರೀಶ್ ರಾವ್ ಹತ್ವಾರ ರವರು ಶಿಕ್ಷಣ ಇರುವುದು ಸಂಪಾದನೆಗೆ, ಓದು ಇರುವುದು ಸಂತೋಷಕ್ಕೆ ಎಂದು ಹೇಳುತ್ತಾ ಪುಸ್ತಕದಿಂದ ಭಾವ ಜಗತ್ತು ವಿಸ್ತಾರಗೊಳ್ಳುತ್ತದೆ ಎಂದು ತಿಳಿಸಿದರು. ಶಾಸಕ ವಿ. ಸುನಿಲ್ ಕುಮಾರ್ ರವರು ಮಾತನಾಡಿ ಹೊಸತನವಿರದ ವ್ಯಕ್ತಿ ಪರಿಪೂರ್ಣನಲ್ಲ. ವ್ಯಕ್ತಿ ಪರಿಪೂರ್ಣವಾಗಬೇಕಾದರೆ ಪುಸ್ತಕಗಳ ಓದು ಅವಶ್ಯಕತೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಪ್ತ ಸಂಸ್ಥಾಪಕರು, ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಸ್ಥೆಯ ಸಹ ಸಂಸ್ಥಾಪಕರಾದ ಅಶ್ವಥ್ ಎಸ್.ಎಲ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ರವರು ಲೇಖಕರ ಸನ್ಮಾನ ಕಾರ್ಯಕ್ರಮವನ್ನು ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್.ಕೆ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕ್ರಿಯೇಟಿವ್ ಕಾಲೇಜಿನಲ್ಲಿ 15 ಪುಸ್ತಕಗಳ ಲೋಕಾರ್ಪಣೆ

