
ನವದೆಹಲಿ: ಆಸ್ಟ್ರಾಜೆನಿಕಾ ಕಂಪನಿಯು ಕೋವಿಶೀಲ್ಡ್ ಲಸಿಕೆಯು ಅಲ್ಪಪ್ರಮಾಣದಲ್ಲಿ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ನಿಜ ಒಪ್ಪಿಕೊಂಡ ಬೆನ್ನಲ್ಲೇ ಹಿರಿಯ ತಜ್ಞ ವೈದ್ಯರಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಐಸಿಎಂಆರ್ನ ಮಾಜಿ ವಿಜ್ಞಾನಿ ಡಾ.ರಮಣ್ ಗಂಗಾಖೇಡ್ಲರ್ ಇಂಥ ಅಡ್ಡಪರಿಣಾಮಗಳು ಪ್ರತಿ 10 ಲಕ್ಷ ಜನರಲ್ಲಿ 7-8 ಜನರಲ್ಲಿ ಮಾತ್ರವೇ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ‘ಕೋವಿಶೀಲ್ಡ್ ಮೊದಲ ಲಸಿಕೆ ಪಡೆದಿರುವವರಲ್ಲಿ ಅಡ್ಡಪರಿಣಾಮ ಉಂಟಾಗುವ ಸಂಭವ ಹೆಚ್ಚಿರುತ್ತದೆ. ಆದರೆ ಎರಡನೇ ಮತ್ತು ಮೂರನೇ ಲಸಿಕೆ ಪಡೆದಂತೆಲ್ಲಾ ಅಡ್ಡಪರಿಣಾಮದ ಸಂಭವನೀಯತೆ ಕಡಿಮೆಯಾಗುತ್ತಾ ಸಾಗುತ್ತದೆ. ಆದರೆ ಅಡ್ಡಪರಿಣಾಮ ಕಾಣಿಸಿಕೊಂಡರೆ ಲಸಿಕೆ ಪಡೆದು ಗರಿಷ್ಠ ಮೂರು ತಿಂಗಳೊಳಗೆ ತ್ರೊಂಬೋಸಿಸ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಬಳಿಕ ಯಾವುದೇ ಅಪಾಯ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರಿಗೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ’ ಎಂದು ಹೇಳಿದ್ದಾರೆ.
ಭಾರತದಲ್ಲಿ 170 ಕೋಟಿ ಡೋಸ್ಗೂ ಹೆಚ್ಚಿನ ಪ್ರಮಾಣದ ಕೋವಿಶೀಲ್ಡ್ ನೀಡಲಾಗಿದ್ದು ಅಂದರೆ ಅಂದಾಜು 80 ಕೋಟಿ ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಈ ಲೆಕ್ಕಾಚಾರದಲ್ಲಿ ಭಾರತದಲ್ಲಿ ಗರಿಷ್ಠ 65000 ಜನರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿರುವ ಸಾಧ್ಯತೆ ಇದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್ರ ಪತ್ನಿ ಡಿಂಪಲ್, ‘ಭಾರತದಲ್ಲಿ ಕೋವಿಡ್ ಲಸಿಕೆಯನ್ನು ಬಲವಂತವಾಗಿ ಹೇರಲಾಗಿತ್ತು. ಈಗ ಇದರ ಕಾರಣ ಬಹಿರಂಗವಾಗುತ್ತಿದೆ’ ಎಂದು ಹರಿಹಾಯ್ದಿದ್ದರೆ, ಎಸ್ಪಿ ಕಾರ್ಯದರ್ಶಿ ಶಿವಪಾಲ್ ಯಾದವ್ ಕಡಿಮೆ ಗುಣಮಟ್ಟದ ಲಸಿಕೆ ನೀಡಿ ಕಮಿಷನ್ ಪಡೆದಿರುವ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೆ ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಮಾತನಾಡಿ, ‘ಕೋವಿಡ್ ಲಸಿಕೆ ಪಡೆದ ಬಳಿಕ ಭಾರತದಲ್ಲಿ ತ್ವರಿತ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಮೂಲ ಕಾರಣ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಅಡ್ಡಪರಿಣಾಮಗಳನ್ನು ತಡೆಯಲು ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಡ ಹೇರಿದ್ದಾರೆ.