
ಕಾರ್ಕಳ: ಇಂದು ಬೆಳಗ್ಗೆ ಸುಮಾರು ನಾಲ್ಕು ಗಂಟೆಯ ವೇಳೆಗೆ ನಗರದ ತೆಳ್ಳಾರು ರಸ್ತೆ 11ನೇ ಕ್ರಾಸ್, ಮರತ್ತಪ್ಪ ಶೆಟ್ಟಿ ಕಾಲೋನಿಯ ಕಿಶೋರ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಚಾರ್ಜ್ ಗಿಟ್ಟ ಮೊಬೈಲ್ ಸ್ಪೋಟಗೊಂಡು ಇಡೀ ಮನೆಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ.
ಎರಡು ಅಂತಸ್ತಿನ 6 ಬೆಡ್ರೂಮ್ ಗಳನ್ನೊಳಗೊಂಡ ಮನೆಯಲ್ಲಿ ಚಾರ್ಜ್ ಗಿಟ್ಟಿದ್ದ ಮೊಬೈಲ್ ಸ್ಪೋಟಗೊಂಡು ಮನೆಯ ಕೋಣೆಗಳಿಗೆಲ್ಲ ಬೆಂಕಿ ಆವರಿಸಿದ್ದು ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಎರಡುವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು.
ಮನೆಯಲ್ಲಿ ಎಸಿ ಆನ್ ಇದ್ದ ಕಾರಣ ಬೆಂಕಿಯ ಕಿಡಿ ಮನೆ ತುಂಬೆಲ್ಲ ಆವರಿಸಿದ್ದು ಪರಿಣಾಮ ಟಿವಿ, ಕಿಟಕಿ, ಫ್ಯಾನ್, ಮೊಬೈಲ್, ಇಂಟೀರಿಯರ್, ಸೋಫಾ ಸೇರಿದಂತೆ ವಿವಿಧ ಪೀಠೋಪಕರಣಗಳು ಬೆಂಕಿಗಾಹುತಿಯಾಗಿ ಸುಮಾರು 7 ಲಕ್ಷ ರೂ ನಷ್ಟ ಉಂಟಾಗಿದೆ.
ಈ ಅವಘಡ ಸಂಭವಿಸಿದಾಗ ಮನೆಯ ಮಾಲಕ ಕಿಶೋರ್ ಕುಮಾರ್ ಶೆಟ್ಟಿ ಅವರು ಮನೆಯಲ್ಲಿಯೇ ಇದ್ದು ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.



















