
ನವದೆಹಲಿ: ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬಳಿಕ ಶುಕ್ರವಾರವಷ್ಟೆ ಜೈಲಿನಿಂದ ಹೊರಬಂದಿರುವ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ 10 ‘ಕೇಜ್ರಿವಾಲ್ ಕಿ ಗ್ಯಾರಂಟಿ’ಗಳನ್ನು ಘೋಷಣೆ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಭಾನುವಾರ
ಸುದ್ದಿಗಾರರೊಂದಿಗೆ ಮಾತನಾಡಿ ಜನರು ‘ಮೋದಿ ಕಿ ಗ್ಯಾರಂಟಿ’ ಮತ್ತು ‘ಕೇಜ್ರಿವಾಲ್ ಕಿ ಗ್ಯಾರಂಟಿ’ ನಡುವೆ ಆಯ್ಕೆ ಮಾಡಬೇಕಾಗುತ್ತದೆ. ಆದರೆ ಸಮಯದ ಅಭಾವ ಇರುವ ಕಾರಣ ಈ ಗ್ಯಾರಂಟಿಗಳ ಘೋಷಣೆ ಬಗ್ಗೆ ನಾನು ಇಂಡಿಯಾ ಕೂಟದ ಪಾಲುದಾರ ಪಕ್ಷಗಳ ಜತೆ ಚರ್ಚಿಸಿಲ್ಲ. ಆದರೆ ಈಡೇರಿಸಬಹುದಾದ ಗ್ಯಾರಂಟಿಗಳು ಇವಾಗಿದ್ದು, ಯಾವ ಮಿತ್ರಪಕ್ಷಗಳೂ ಇವನ್ನು ವಿರೋಧಿಸಲಿಕ್ಕಿಲ್ಲ. ಇವುಗಳನ್ನು ಈಡೇರಿಸಲು ಆ ಪಕ್ಷಗಳಿಗೆ ಕೋರುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
10 ‘ಕೇಜ್ರಿವಾಲ್ ಕಿ ಗ್ಯಾರಂಟಿ’:
- 24 ತಾಸು ವಿದ್ಯುತ್ ಸರಬರಾಜು: ರಾಷ್ಟ್ರವ್ಯಾಪಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ 200 ಯುನಿಟ್ ಉಚಿತ ವಿದ್ಯುತ್
- ಶಿಕ್ಷಣ ಸುಧಾರಣೆ: ಖಾಸಗಿ ಸಂಸ್ಥೆಗಳನ್ನು ಮೀರಿಸುವಂತೆ ಗುಣಮಟ್ಟದ ಸರ್ಕಾರಿ ಶಾಲೆ ಸ್ಥಾಪಿಸಿ ದೇಶದಲ್ಲಿ ಜನಿಸಿದ ಪ್ರತಿ ಮಗುವಿಗೆ ಉಚಿತ ಶಿಕ್ಷಣ.
- ಆರೋಗ್ಯ ಸುಧಾರಣೆ: ಪ್ರತಿ ಗ್ರಾಮ ಮತ್ತು ಪ್ರದೇಶದಲ್ಲಿ ಮೊಹಲ್ಲಾ ಕ್ಲಿನಿಕ್ ಸ್ಥಾಪನೆ. ಜಿಲ್ಲಾ ಆಸ್ಪತ್ರೆಗಳು ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ
- ರಾಷ್ಟ್ರೀಯ ಭದ್ರತೆ: ಚೀನಾ ಆಕ್ರಮಿಸಿಕೊಂಡಿರುವ ಭೂಮಿ ಮರಳಿ ಪಡೆಯಲು ಕ್ರಮ ಕೈಗೊಂಡು ಸೈನ್ಯಕ್ಕೆ ಸಂಪೂರ್ಣ ಸ್ವಾಯತ್ತೆ. ಪ್ರಾದೇಶಿಕ ಸಮಗ್ರತೆಗಾಗಿ ರಾಜತಾಂತ್ರಿಕ ಪ್ರಯತ್ನ ಮುಂದುವರಿಕೆ.
- ಅಗ್ನಿವೀರ ಯೋಜನೆ ಸ್ಥಗಿತ: ಸೇನೆಗೆ 4 ವರ್ಷ ಮಟ್ಟಿಗೆ ಹಂಗಾಮಿ ಯೋಧರ ನೇಮಿಸುವ ಅಗ್ನಿವೀರ್ ಯೋಜನೆ ಸ್ಥಗಿತ. ಗುತ್ತಿಗೆ ವ್ಯವಸ್ಥೆ ಸ್ಥಗಿತ. ಯೋಧರಿಗೆ ಕಾಯಂ ಹುದ್ದೆ
- ರೈತ ಕಲ್ಯಾಣ: ಸ್ವಾಮಿನಾಥನ್ ವರದಿ ಆಧಾರದ ಮೇಲೆ ಬೆಳೆಗಳಿಗೆ ನ್ಯಾಯಯುತ ಬೆಲೆ. ರೈತರಿಗೆ ಗೌರವಯುತ ಜೀವನದ ಗ್ಯಾರಂಟಿ.
- ದೆಹಲಿ ರಾಜ್ಯ ಸ್ಥಾನಮಾನ: ಕೇಂದ್ರಾಡಳಿತ ಪ್ರದೇಶವಾದ ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ. ದಿಲ್ಲಿ ನಿವಾಸಿಗಳ ಬಹುಕಾಲದ ಬೇಡಿಕೆ ಈಡೇರಿಕೆ
- ಉದ್ಯೋಗ ಸೃಷ್ಟಿ: ಇಂಡಿಯಾ ಕೂಟದಿಂದ ವಾರ್ಷಿಕ 2 ಕೋಟಿ ಹೊಸ ಉದ್ಯೋಗಗಳ ಸೃಷ್ಟಿ
- ಭ್ರಷ್ಟಾಚಾರ ನಿರ್ಮೂಲನೆ: ಬಿಜೆಪಿಯ ’ರಕ್ಷಣಾತ್ಮಕ ಕ್ರಮಗಳನ್ನು’ ಕಿತ್ತುಹಾಕುವ ಮೂಲಕ ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆಗೆ ಪಣ.
- ವ್ಯಾಪಾರ-ಉದ್ಯಮ ಉತ್ತೇಜನ: ಉತ್ಪಾದಕ ವಲಯದಲ್ಲಿ ಚೀನಾ ಮೀರಿಸುವ ಗುರಿ. ಜಿಎಸ್ಟಿ ಸರಳೀಕರಣಕ್ಕಾಗಿ ಅದರಲ್ಲಿನ ಅಕ್ರಮ ಹಣ ವರ್ಗಾವಣೆ (ಪಿಎಂಎಲ್ಎ) ನಿಯಮ ರದ್ದು