
ಜೈಪುರ : ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಟೋಂಕ್ನಲ್ಲಿ ಬಿಜೆಪಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಪತ್ತಿನ ಎಕ್ಸ್ ರೇ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರ ಅರ್ಥ ಸಂಪತ್ತನ್ನು ಪೆಟ್ಟಿಗೆಯಲ್ಲಿ ಇಟ್ಟಿದ್ದರೆ ಅಥವಾ ಗೋಡೆಯಲ್ಲಿ ಬಚ್ಚಿಟ್ಟಿದ್ದರೆ ಅದನ್ನು ಎಕ್ಸ್ ರೇ ಮೂಲಕ ಹುಡುಕಿ ನಂತರ ಅಗತ್ಯಕ್ಕಿಂತ ಹೆಚ್ಚಿರುವ ನಿಮ್ಮ ಆಸ್ತಿಯನ್ನೆಲ್ಲ ವಶಪಡಿಸಿಕೊಂಡು ಜನರಿಗೆ ಹಂಚುತ್ತಾರೆ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ನ ಮತಬ್ಯಾಂಕ್ ಮತ್ತು ತುಷ್ಟೀಕರಣದ ರಾಜಕೀಯವನ್ನು ನಾನು ಬಹಿರಂಗಪಡಿಸಿದ್ದೇನೆ. ನಿಮ್ಮ ಸಂಪತ್ತನ್ನು ಕಿತ್ತುಕೊಂಡು ‘ಆಯ್ದ’ ಜನರಿಗೆ ಹಂಚಲು ಕಾಂಗ್ರೆಸ್ ಆಳವಾದ ಪಿತೂರಿ ನಡೆಸುತ್ತಿದೆ ಎಂಬ ಸತ್ಯವನ್ನು ನಾನು ದೇಶದ ಮುಂದೆ ಮಂಡಿಸಿದ್ದೇನೆ. ತನ್ನ ಗುಟ್ಟು ರಟ್ಟಾಗಿದ್ದು ಕಾಂಗ್ರೆಸ್ಗೆ ಎಷ್ಟು ಕೋಪ ತಂದಿದೆಯೆಂದರೆ ಅವರನ್ನು ಎಲ್ಲೆಡೆ ನಿಂದಿಸಲು ಪ್ರಾರಂಭಿಸಿದ್ದಾರೆ. ‘ಸತ್ಯಕ್ಕೆ ಹೆದರಿ ಕಾಂಗ್ರೆಸ್ ತನ್ನ ನೀತಿಗಳನ್ನು ಏಕೆ ಮರೆಮಾಚುತ್ತಿದೆ? ನೀವು ನೀತಿ ರೂಪಿಸಿದ್ದು ನಿಜ. ಆದರೆ ಮೋದಿ ಅದರ ರಹಸ್ಯ ಬಹಿರಂಗಪಡಿಸಿದಾಗ ಮತ್ತು ನಿಮ್ಮ ಹಿಡನ್ ಅಜೆಂಡಾ ಹೊರಬಂದಾಗ ನೀವು ನಡುಗುತ್ತೀರಿ’ ಎಂದು ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿದರು.