
ನವದೆಹಲಿ (ಏ.24): ಈಗಾಗಲೇ ಬಿಸಿಲಿನ ತಾಪದಿಂದ ತತ್ತರಿಸಿತ್ತಿರುವ ನಡುವೆ ಕರ್ನಾಟಕವೂ ಸೇರಿದಂತೆ ದಕ್ಷಿಣ ಹಾಗೂ ಪೂರ್ವ ಭಾರತದ ಪ್ರದೇಶಗಳಿಗೆ ಉಷ್ಣಹವೆ ಪ್ರವೇಶಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಇಲಾಖೆ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸಾಮಾನ್ಯಕ್ಕಿಂತ ಎರಡರಿಂದ ಏಳು ಡಿಗ್ರಿ ಸೆಲ್ಶಿಯಸ್ನಷ್ಟು ತಾಪಮಾನ ಹೆಚ್ಚಿದೆ. ಅದರಲ್ಲೂ ಆಂಧ್ರಪ್ರದೇಶದ ಅನಂತಪುರದಲ್ಲಿ ಅತಿಹೆಚ್ಚು 43.5 ಡಿಗ್ರಿ ತಾಪಮಾನ ದಾಖಲಾಗಿದೆ. ಜೊತೆಗೆ ಕರ್ನೂಲ್ನಲ್ಲಿ 43.2 ಡಿಗ್ರಿ, ತಮಿಳುನಾಡಿನ ಸೇಲಂನಲ್ಲಿ 42.3 ಡಿಗ್ರಿ ಮತ್ತು ಈರೋಡ್ನಲ್ಲಿ 42 ಡಿಗ್ರಿ ತಾಪಮಾನ ದಾಖಲಾಗಿ ಅಗ್ರ 5 ಸ್ಥಾನ ಗಳಿಸಿವೆ.ಇದಕ್ಕೂ ಮೊದಲು ಏಪ್ರಿಲ್ 15 ರಂದು ಒಡಿಶಾದಲ್ಲಿ ಮತ್ತು 17ರಂದು ಪಶ್ಚಿಮ ಬಂಗಾಳದಲ್ಲಿ ಉಷ್ಣಹವೆಯ ಮೊದಲ ಚರಣ ಬಂದು ಹೋಗಿದ್ದು, ಇದು ಈ ತಿಂಗಳಲ್ಲಿ ಬರುತ್ತಿರುವ ಎರಡನೇ ಚರಣದ ಉಷ್ಣಹವೆಯಾಗಿದೆ.ಒಂದು ದಿನದ ಹಿಂದಷ್ಟೇ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಮುಂದಿನ 5 ದಿನಗಳ ಕಾಲ ಉಷ್ಣಹವೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿತ್ತು.