
ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಂಪನ್ಮೂಲ ವ್ಯಕ್ತಿ , ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಪ್ರಭಾತ್ ರಂಜಾನ್ “ನಾವು ಮತ್ತು ನಮ್ಮ ಪರಿಸರ” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಅವರು ಮಾತನಾಡುತ್ತ ಮಾನವ ಮತ್ತು ಪ್ರಕೃತಿಗೆ ಅವಿನಾಭಾವ ಸಂಬಂಧವಿದೆ. ಯಾಕೆಂದರೆ ಮನುಷ್ಯ ಪ್ರಕೃತಿಯಲ್ಲಿಯೇ ಹುಟ್ಟಿ , ಬೆಳೆದು ತನಗೆ ಬೇಕಾದೆಲ್ಲವನ್ನು ಪ್ರಕೃತಿಯಿಂದ ಪಡೆದುಕೊಂಡು ಸಂಪೂರ್ಣವಾಗಿ ಪ್ರಕೃತಿಯನ್ನು ಅವಲಂಬಿತನಾಗಿದ್ದಾನೆ. ಆದರೆ ಇಂದು ಮಾನವನು ಅದನ್ನು ಮರೆತು, ಆಸ್ತಿ,ಹಣ ಸಂಪಾದನೆಗಾಗಿ ಪರಿಸರವನ್ನು ನಾಶಮಾಡುವಂತೆ ವರ್ತಿಸಿ ತನ್ನ ನಾಶಕ್ಕೆ ನಾಂದಿಯನ್ನು ಇಟ್ಟಿದ್ದಾನೆ ಎಂದು ಹೇಳಬಹುದು. ಮಾನವನ ದುರಾಡಳಿತದಿಂದ ಪ್ರಕೃತಿಯು ವಿಕೋಪಗೊಂಡು, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಸಾಂಕ್ರಾಮಿಕ ರೋಗಗಳ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಮಾನವನ ದುರಾಡಳಿತವು ಹೀಗೆಯೇ ಮುಂದುವರೆದರೆ ಮುಂದೆ ಒಂದು ದಿನ ಇಡೀ ಮನುಕುಲವೇ ನಾಶವಾಗುವುದರಲ್ಲಿ ಸಂಶಯವಿಲ್ಲ. ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪರಿಸರವನ್ನು ಪ್ರೀತಿಸೋಣ. ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾಲೇಜಿನ ಪ್ರೌಢಶಾಲಾ ವಿಭಾಗದ ಸಂಪನ್ಮೂಲ ವ್ಯಕ್ತಿ , ಅಧ್ಯಾಪಕ ದೇವದಾಸ್ ಕೆರೆಮನೆ “ಸ್ವಚ್ಚತೆ ಮತ್ತು ಆರೋಗ್ಯ” ಎಂಬ ವಿಷಯದ ಬಗ್ಗೆ ಮಾತನಾಡಿದರು. ಅವರು ಮೈ ಮತ್ತು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದೇ ಸ್ವಚ್ಚತೆ. ನಮ್ಮ ಮನಸ್ಸು ಶುದ್ಧವಾಗಿದ್ದರೆ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ದೇಹ ಶುದ್ಧವಾಗಿದ್ದರೆ ದೈಹಿಕ ಆರೊಗ್ಯ ಚೆನ್ನಾಗಿರುತ್ತದೆ.
ಹಾಗಾಗಿ ಸ್ವಚ್ಚತೆ ನಮ್ಮ ಉತ್ತಮ ಆರೋಗ್ಯದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಉತ್ತಮ ಆರೋಗ್ಯ ಮತ್ತು ಶುಚಿತ್ವ ಜೊತೆ ಜೊತೆಯಲ್ಲಿಯೇ ಸಾಗುತ್ತದೆ. ವೈಯಕ್ತಿಕ ಆರೋಗ್ಯದ ಮೇಲೆ ಸಾಮಾಜಿಕ ಸ್ವಚ್ಚತೆ ಬಹಳ ಪರಿಣಾಮಕಾರಿಯಾಗಿ ರುವುದರಿಂದ ಸ್ವಚ್ಚತೆ ಎನ್ನುವುದು ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಜವಾಬ್ದಾರಿಯಾಗಿದೆ. ಆದ್ದರಿಂದ
ಶುಚಿತ್ವವು ನಮ್ಮ ಜೀವನದ ಮೂಲಭೂತ ಅಂಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ರಾಮದಾಸ್ ಪ್ರಭು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಪ್ರೌಢ ಶಾಲಾ ಹಾಗೂ ಕಾಲೇಜು ವಿಭಾಗದ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಂಗ್ಲ ಭಾಷಾ ಅಧ್ಯಾಪಕ ಸುನಿಲ್ ಎಸ್ ಶೆಟ್ಟಿ ಸ್ವಾಗತಿಸಿದರು. ಹಿಂದಿ ಭಾಷಾ ಶಿಕ್ಷಕಿ ಪ್ರಭಾ ಜಿ ವಂದಿಸಿದರು.
ಹಿರಿಯ ಉಪನ್ಯಾಸಕರಾದ ನೇಮಿರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.