ಕಾರ್ಕಳ ತಹಶೀಲ್ದಾರ್ ಮೂಲಕ ಸಿಎಂ ಗೆ ಮನವಿ

ಕಾರ್ಕಳ :ದಿ.01.04.2006 ಕ್ಕೂ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ನೌಕರರಿಗೆ ಅವರ ಅನುದಾನಕ್ಕೂ ಪೂರ್ವದ ಅನುದಾನರಹಿತ ಸೇವೆಯನ್ನು ಕೇವಲ ಪಿಂಚಣಿ ಸೌಲಭ್ಯಕ್ಕೆ ಮಾತ್ರ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ನೀಡಬೇಕು. ಇದಕ್ಕೆ ಮಾರಕವಾಗಿರುವ 2014 ರ ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವಿಧೇಯಕ 2014 ಕ್ಕೆ ತಿದ್ದುಪಡಿ ತಂದು ಅಥವಾ ಭವಿಷ್ಯಾವರ್ತಿಯಾಗಿ ಜಾರಿಗೆ ಬರುವಂತೆ ಕ್ರಮವಹಿಸಬೇಕು. ಓ. ಪಿ. ಎಸ್. ಜಾರಿ ವಿಳಂಬವಾದಲ್ಲಿ ರಾಜ್ಯ ಸರಕಾರಿ ನೌಕರರಿಗೆ ನೀಡುತ್ತಿರುವಂತೆ ಎನ್. ಪಿ. ಎಸ್. ನ್ನು ಯಥಾವತ್ತಾಗಿ ಜಾರಿ ಮಾಡುವುದು. ನೇಮಕಾತಿ, ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರಕಾರವೇ ಭರಿಸಲು ಕ್ರಮವಹಿಸಬೇಕು.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು. ಅನುದಾನಿತ ನೌಕರರಿಗೂ ಕೂಡ ಸರಕಾರಿ ನೌಕರರಂತೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಬೇಕು. ಸರಕಾರಿ ಶಾಲಾ ಕಾಲೇಜುಗಳು ಮತ್ತು ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಲಿ ಹಾಗೂ ನೌಕರರಿಗಾಗಲಿ ಯಾವುದೇ ತಾರತಮ್ಯ ನೀತಿ ತೋರಿಸದೇ ಎಲ್ಲ ಸೌಲಭ್ಯಗಳನ್ನು ಯಥಾವತ್ತಾಗಿ ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಕರೆಯಂತೆ ಕಾರ್ಕಳ ತಾಲೂಕು ತಹಸೀಲ್ದಾರರಾದ ನರಸಪ್ಪ ತಹಸೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಉಡುಪಿ ಜಿಲ್ಲಾ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತರ ಸಂಘದ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಭಟ್ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ನಿಯೋಗದಲ್ಲಿ ಉಡುಪಿ ಜಿಲ್ಲಾ ಸಂಘದ ಕೋಶಾಧಿಕಾರಿ ಸಂಜೀವ ಪೂಜಾರಿ ಯಂ., ತಾಲೂಕು ಘಟಕದ ಉಪಾಧ್ಯಕ್ಷರಾದ ಗಣೇಶ್ ಜಾಲ್ಸೂರು, ಕಾರ್ಯದರ್ಶಿಗಳಾದ ನಂದನ್ ದೇವಾಡಿಗ, ಸದಸ್ಯರುಗಳಾದ ರಘುಪತಿ ಹೆಬ್ಬಾರ್, ಪೂರ್ಣಿಮಾ ಶೆಣೈ, ಮಾದಪ್ಪ ಎನ್., ಸುನಿಲ್ ಶೆಟ್ಟಿ , ಪ್ರಶಾಂತ್ ಕುಮಾರ್ ಶೆಟ್ಟಿ, ದಿವ್ಯ ಕುಮಾರ್, ಜಾನ್ ಲಿಸ್ಟನ್ ಮೊಂತೆರೊ , ನಯನಾ ಶೆಣೈ, ತಿಪ್ಪೇಸ್ವಾಮಿ ಆರ್. ಉಪಸ್ಥಿತರಿದ್ದರು