
ಕಾರ್ಕಳ :ಪ್ರಾಚೀನ ಕಾಲದ ಋಷಿಮುನಿಗಳು, ಸಾಧುಸಂತರುಗಳು, ದಾರ್ಶನಿಕರು, ಆಚಾರ್ಯತ್ರಯರು, ವಚನಕಾರರು, ದಾಸವರೇಣ್ಯರು, ಸಾಮಾಜಿಕ ಸುಧಾರಕರು, ಮಹಾಪುರುಷರು ನಮ್ಮ ಜೀವನ ಹೇಗಿರಬೇಕೆಂದು ತಮ್ಮ ಆದರ್ಶ ಗುಣಗಳ ಮೂಲಕ ನಮಗೆ ತೋರಿಸಿಕೊಟ್ಟಿದ್ದಾರೆ. ದೇವಾತಾರಾಧನೆಯು ನಮ್ಮ ಭಾರತ ದೇಶದ ಸಂಸ್ಕೃತಿಯ ತಿರುಳು. ಪ್ರತಿಯೊಬ್ಬರೂ ದೇವರ ಅನುಗ್ರಹವನ್ನು ಪಡೆದು ಕರ್ತವ್ಯ ನಿರ್ವಹಿಸಿದಾಗ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಆಧುನಿಕ ಜೀವನ ಶೈಲಿಗೆ ಒಳಗಾದ ನಾವುಗಳು ಒತ್ತಡ, ಉದ್ವೇಗದ ನಡುವೆ ಮಾನಸಿಕ ಶಾಂತಿ, ನೆಮ್ಮದಿ, ತೃಪ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇಂತಹ ಕಾಲಘಟ್ಟದಲ್ಲಿ ನಮ್ಮ ಜೀವನಕ್ಕೆ ಚೈತನ್ಯವನ್ನು ನೀಡಿ ಮಾನಸಿಕ ನೆಮ್ಮದಿಯನ್ನು ಪಡೆಯಲು ಧಾರ್ಮಿಕ, ಆಧ್ಯಾತ್ಮಿಕ ಶಿಕ್ಷಣದ ಅವಶ್ಯಕತೆ ಇದೆ. ನಾವು ಕ್ಷಣಿಕ ಸುಖಕ್ಕಾಗಿ ಜೀವನ ಮೌಲ್ಯಗಳಿಂದ ವಿಮುಖರಾಗದೆ ಸತ್ಯ, ನ್ಯಾಯ, ಧರ್ಮ ಮಾರ್ಗದಲ್ಲಿ ನಡೆದಾಗ ಭಗವಂತನು ನಮ್ಮನ್ನು ಕಾಪಾಡುತ್ತಾನೆ. ನಮ್ಮ ಸಮಯವನ್ನು ಸದ್ವಿಚಾರ, ಸದ್ವರ್ತನೆ, ಸತ್ಕಾರ್ಯಗಳ ಮೂಲಕ ಸದುಪಯೋಗಪಡಿಸಿಕೊಂಡು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಆನಂದಿಸೋಣ ಎಂದು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.)ಕಾರ್ಕಳ ತಾಲೂಕು, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಹಿರ್ಗಾನ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಿರ್ಗಾನ ಇದರ ಆಶ್ರಯದಲ್ಲಿ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಹಿರ್ಗಾನದಲ್ಲಿ ನಡೆದ 26 ನೆ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಧಾರ್ಮಿಕ ಪ್ರವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಉಡುಪಿ ಗ್ರಾಮಭಿವೃದ್ಧಿ ಯೋಜನೆಯ ತರಬೇತು ಸಂಸ್ಥೆಯ ಉಪನ್ಯಾಸಕರಾದ ನವೀನ ಶೆಟ್ಟಿ ನಾವು ಜೀವಿ ತಾವಧಿಯಲ್ಲಿ ಮಾಡುವ ಉತ್ತಮ ಕಾರ್ಯಗಳನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಧಾರ್ಮಿಕ ಆಚರಣೆಗಳ ಮಹತ್ವವನ್ನು ಅರಿತು ಅದನ್ನು ಪಾಲಿಸಿಕೊಂಡು ಬಂದಾಗ ಜೀವನದಲ್ಲಿ ಶ್ರೇಯಸ್ಸನ್ನು ಪಡೆಯಲು ಸಾಧ್ಯ ಎಂದು ಹೇಳಿದರು.ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಕಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಮಾತನಾಡಿ ಗ್ರಾಮಭಿವೃದ್ಧಿ ಯೋಜನೆ ಸಂಘಟನೆಯು ನಿರಂತರ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವ ಮೂಲಕ ಜನಸಾಮಾನ್ಯರ ಏಳಿಗೆಗೆ ಕಾರಣೀಭೂತವಾದ ಕಾರ್ಯವನ್ನು ನಡೆಸುತ್ತಿದೆ. ಸ್ವಾವಲಂಬಿ ಬದುಕನ್ನು ಸಾಗಿಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದರು. ವೇದಿಕೆಯಲ್ಲಿ ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನೀತಾ ಪೂಜಾರಿ, ಸತ್ಯನಾರಾಯಣ ಪೂಜಾ ಸಮಿತಿ ಗೌರವಾಧ್ಯಕ್ಷರಾದ ಸಿರಿಯಣ್ಣ ಶೆಟ್ಟಿ ಮತ್ತು ಅಶೋಕ ನಾಯಕ್, ಹಿರ್ಗಾನ ‘ಎ ‘ ಮತ್ತು ‘ಬಿ ‘ಒಕ್ಕೂಟದ ಅಧ್ಯಕ್ಷರಾದ ಸತೀಶ್ ಪೂಜಾರಿ ಮತ್ತು ಸುಭಾಷ್ ಪೂಜಾರಿ, ಸೇವಾಪ್ರತಿನಿಧಿಗಳಾದ ಪ್ರತಿಭಾ ಮತ್ತು ಸುಜಯ ಉಪಸ್ಥಿತರಿದ್ದರು. ಹಿರ್ಗಾನ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಜನಜಾಗೃತಿ ವೇದಿಕೆಯ ಸದಸ್ಯರಾದ ವಾಸು ಶೆಟ್ಟಿ ಸ್ವಾಗತಿಸಿ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಸಂಜೀವ ಪೂಜಾರಿ ವಂದಿಸಿದರು. ಗ್ರಾಮಭಿವೃದ್ಧಿ ಯೋಜನೆಯ ಕಾರ್ಕಳ ನಗರ ವಲಯದ ಮೇಲ್ವಿಚಾರಕರಾದ ಗೀತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಸರ್ವ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



















