
ಫರಿದಾಬಾದ್: ಸುರಜ್ಕುಂಡ್ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ಶನಿವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡಿದ್ದಾರೆ. ಮೇಳದಲ್ಲಿ ಅಳವಡಿಸಿದ್ದ ‘ಸುನಾಮಿ ಸ್ವಿಂಗ್’ ಉಯ್ಯಾಲೆ ತಾಂತ್ರಿಕ ದೋಷದಿಂದ ಚಲನೆಯಲ್ಲೇ ಕುಸಿದಿದ್ದು ದುರ್ಘಟನೆಗೆ ಕಾರಣವಾಗಿದೆ.
ಮೃತರನ್ನು ಪಲ್ವಲ್ ಜಿಲ್ಲೆಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಉಯ್ಯಾಲೆಯು ವಾಲುತ್ತಿರುವುದನ್ನು ಗಮನಿಸಿದ ಅವರು ಪ್ರವಾಸಿಗರ ರಕ್ಷಣೆಗೆ ಮುಂದಾದಾಗ, ಭಾರೀ ಕಬ್ಬಿಣದ ಭಾಗ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಈ ವೇಳೆ ಇಬ್ಬರು ಮಹಿಳಾ ಕಾನ್ಸ್ಟೇಬಲ್ಗಳಿಗೂ ಗಾಯಗಳಾಗಿವೆ.
ಘಟನೆಯಲ್ಲಿ ಒಟ್ಟು 13 ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ದಿನದಂದು ಬಲವಾದ ಗಾಳಿಯಿಂದ ಫುಡ್ ಕೋರ್ಟ್ ಗೇಟ್ ಕುಸಿದು ಮಗು ಸೇರಿ ಇಬ್ಬರು ಗಾಯಗೊಂಡ ಘಟನೆ ಕೂಡ ವರದಿಯಾಗಿದೆ.
ಘಟನೆಗೆ ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿ ಉಯ್ಯಾಲೆಗಳ ಸುರಕ್ಷತಾ ಪ್ರಮಾಣಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ.



















