
ನವದೆಹಲಿ: ಸುಪ್ರೀಂಕೋರ್ಟ್ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ನ್ಯಾಯದೇವತೆಯ ನೂತನ ಮೂರ್ತಿಯೊಂದನ್ನು ಅಳವಡಿಸಲಾಗಿದ್ದು, ಈ ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿ ಆಕೆಗೆ ಕೈಯ್ಯಲ್ಲಿ ಖಡ್ಗದ ಬದಲು ಸಂವಿಧಾನ ಕೊಡಲಾಗಿದೆ. ಈ ಮೂಲಕ ಕಾನೂನು ಕುರುಡಲ್ಲ ಹಾಗೂ ಶಿಕ್ಷೆಯನ್ನು ಪ್ರತಿನಿಧಿಸುವುದಿಲ್ಲ ಎಂಬ ಸಂದೇಶ ರವಾನಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಆದೇಶದಂತೆ ಈ ಬದಲಾವಣೆಗಳನ್ನು ಮಾಡಲಾಗಿದೆ. ಭಾರತವು ವಸಾಹತುಶಾಹಿ ಪರಂಪರೆಯನ್ನು ಕೈಬಿಟ್ಟು ಮುಂದುವರೆಯಬೇಕು. ಕಾನೂನು ಕುರುಡಲ್ಲ, ಹಾಗೂ ಅದು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಖಡ್ಗ ಕ್ರೌರ್ಯದ ಸಂಕೇತ. ಹಾಗಾಗಿ ಅದರ ಬದಲು ನ್ಯಾಯದೇವತೆಯ ಕೈಗೆ ಸಂವಿಧಾನವನ್ನು ಕೊಡುವುದರಿಂದ ಆಕೆ ಅದರ ಪ್ರಕಾರವೇ ನ್ಯಾಯ ಮಾಡುತ್ತಾಳೆ ಎಂಬ ಸಂದೇಶ ರವಾನೆಯಾಗುತ್ತದೆ’ ಎಂದು ನಂಬಿರುವ ಚಂದ್ರಚೂಡ್ ಬದಲಾವಣೆಗಳನ್ನು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ಮೊದಲು ನ್ಯಾಯ ದೇವತೆಯ ಕಣ್ಣಿಗೆ ಕಪ್ಪು ಪಟ್ಟಿಯನ್ನು ಕಟ್ಟಲಾಗಿತ್ತು. ಇದು, ಆಕೆ ಸಂಪತ್ತು, ಅಧಿಕಾರ, ಅಥವಾ ಸ್ಥಾನಮಾನಗಳನ್ನು ಸೂಚಿಸುವ ಏನನ್ನೂ ನೋಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಾಳೆ ಎಂಬ ಸಂದೇಶವನ್ನು ಸಾರುತ್ತಿತ್ತು. ಅಂತೆಯೇ, ಖಡ್ಗವು ಅನ್ಯಾಯ ಮಾಡುವವರಿಗೆ ಶಿಕ್ಷೆ ಖಚಿತ ಎನ್ನುವುದನ್ನು ಸೂಚಿಸುತ್ತಿತ್ತು.













