
ಸೊಲ್ಲಾಪುರ: ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಸಂಸದ ಅಸಾದುದ್ದೀನ್ ಓವೈಸಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿ ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಅವಕಾಶಗಳು ಸಿಗುತ್ತಿವೆ. ಈ ಸಂವಿಧಾನದ ಬಲದಿಂದ ಹಿಜಾಬ್ ಧರಿಸಿದ ಮಹಿಳೆ ಒಂದು ದಿನ ಭಾರತದ ಪ್ರಧಾನಿಯಾಗುತ್ತಾಳೆ ಎಂದು ಹೇಳಿದ್ದಾರೆ.
ಮಹಾ ಮೈತ್ರಿಕೂಟ ಹಾಗೂ ಎನ್ ಸಿಪಿ ನಾಯಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ತೀವ್ರವಾಗಿ ಟೀಕಿಸಿದ ಓವೈಸಿ ಅಜಿತ್ ಪವಾರ್ ಗೆ ಹಾಕುವ ಮತ ನರೇಂದ್ರ ಮೋದಿಗೆ ಹಾಕಿದಂತಾಗುತ್ತದೆ. ಅವರ ಪಕ್ಷಕ್ಕೆ ಹಾಕುವ ಮತ ಮೋದಿ ಸರ್ಕಾರ ಜಾರಿಗೆ ತಂದಿರುವ ವಕ್ಫ್ ಕಾಯ್ದೆಗೆ ಹಾಕಿದಂತಾಗುತ್ತದೆ ಎಂದು ಹೇಳಿದ್ದಾರೆ.
‘ಅಂಬೇಡ್ಕರ್ ಅವರು ನೀಡಿದ ಭಾರತೀಯ ಸಂವಿಧಾನವು ಯಾವುದೇ ಭಾರತೀಯನು ದೇಶದ ಪ್ರಧಾನಿಯಾಗಲು ಅವಕಾಶ ನೀಡುತ್ತದೆ, ಹಿಜಾಬ್ ಧರಿಸಿದ ಮಹಿಳೆಯೊಬ್ಬರು ಈ ದೇಶದ ಪ್ರಧಾನಿಯಾಗುವ ದಿನ ಖಂಡಿತವಾಗಿಯೂ ಬರುತ್ತದೆ. ಆದರೆ ಆ ದಿನವನ್ನು ನೋಡಲು ನಾನು ಬದುಕದೆ ಇರಬಹುದು’ ಎಂದು ಹೇಳಿದ್ದಾರೆ.



















