
ಸಾಂಗ್ಲಿ: ಗುರುವಾರ ರಾಹುಲ್ ಗಾಂಧಿಯವರು ಶಿವಾಜಿ ಪ್ರತಿಮೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಸಿಂಧುದುರ್ಗಾ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದಿರುವುದಕ್ಕಾಗಿ ಮಹಾರಾಷ್ಟ್ರದ ಪ್ರತಿಯೋರ್ವರ ಕ್ಷಮೆ ಹೇಳಬೇಕು. ಅಲ್ಲದೆ ಪ್ರತಿಭಟನೆಯ ಬಳಿಕ ಹಿಂಪಡೆಯಲಾದ ರೈತ ವಿರೋಧಿ ಕಾಯ್ದೆ, ತಪ್ಪಾದ ಜಿಎಸ್ಟಿ ಜಾರಿಗೆ ತಂದಿರುವುದಕ್ಕೆ, ನಗದು ಅಮಾನ್ಯೀಕರಣಕ್ಕೆ ಕೂಡ ನರೇಂದ್ರ ಮೋದಿ ಅವರು ಕ್ಷಮೆ ಕೋರಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಾಕೆ ಕ್ಷಮೆ ಕೋರುತ್ತಿದ್ದಾರೆ ಎಂದು ನಾನು ತಿಳಿಯಲು ಬಯಸುತ್ತೇನೆ. ಶಿವಾಜಿ ಪ್ರತಿಮೆಯ ನಿರ್ಮಾಣದ ಗುತ್ತಿಗೆಯನ್ನು ಅರ್ಹತೆ ಇಲ್ಲದ ಆರೆಸ್ಸೆಸ್ ಕಾರ್ಯಕರ್ತನಿಗೆ ನೀಡಿರುವುದಕ್ಕಾಗಿಯೇ? ಅಥವಾ ಪ್ರಕ್ರಿಯೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕಾಗಿಯೇ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಎಲ್ಲಾ ಗುತ್ತಿಗೆಗಳನ್ನು ಅದಾನಿ ಹಾಗೂ ಅಂಬಾನಿಗೆ ನೀಡಿ ಇಬ್ಬರ ಉಪಯೋಗಕ್ಕಾಗಿ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಗಳನ್ನು ನಾಶ ಮಾಡಲಾಗುತ್ತಿದೆ. ಇಂದಿನ ರಾಜಕೀಯ ಎರಡು ಸಿದ್ಧಾಂತಗಳ ನಡುವಿನ ಹೋರಾಟ. ನಾವು ಸಾಮಾಜಿಕ ಪ್ರಗತಿಯನ್ನು ಹಾಗೂ ನಮ್ಮೊಂದಿಗೆ ಪ್ರತಿಯೊಬ್ಬರನ್ನು ಕರೆದೊಯ್ಯಲು ಬಯಸುತ್ತೇವೆ. ಆದರೆ, ಬಿಜೆಪಿ ಆಯ್ದ ಕೆಲವರ ಅಭಿವೃದ್ಧಿಯನ್ನು ಮಾತ್ರ ಬಯಸುತ್ತದೆ ಎಂದು ಆಕ್ರೋಶ ಹೊರಹಾಕಿದರು.













